ADVERTISEMENT

ಪೊಲೀಸ್ ‘ವೇಷ’ದಲ್ಲಿ ಪಿಸ್ತೂಲ್ ಕದ್ದೊಯ್ದರು!

ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ ನಾಲ್ವರ ಗ್ಯಾಂಗ್

ಎಂ.ಸಿ.ಮಂಜುನಾಥ
Published 30 ಸೆಪ್ಟೆಂಬರ್ 2018, 19:38 IST
Last Updated 30 ಸೆಪ್ಟೆಂಬರ್ 2018, 19:38 IST
   

ಬೆಂಗಳೂರು: ಪೊಲೀಸ್ ಸಮವಸ್ತ್ರ ಹಾಕಿಕೊಂಡು ಜೀಪಿನಲ್ಲಿ ಬಂದ ನಾಲ್ವರು ಸುಲಿಗೆಕೋರರು, ಕಾರು ಅಡ್ಡಗಟ್ಟಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ನಿವೃತ್ತ ನೌಕರನಿಂದ ಪಿಸ್ತೂಲ್ ಕಿತ್ತುಕೊಂಡು ಹೋಗಿದ್ದಾರೆ.

ಈ ಸಂಬಂಧ ತಮಿಳುನಾಡು ರಾಜಾ ಸ್ಟ್ರೀಟ್‌ನ ಧರಣಿದರನ್ ಅವರು ಸೆ.25ರಂದು ದೇವನಹಳ್ಳಿ ಠಾಣೆಗೆ ದೂರು ಕೊಟ್ಟಿದ್ದಾರೆ. 22 ವರ್ಷ
ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡಿರುವ ಅವರು, 2013ರಲ್ಲಿ ಸ್ವಯಂ ನಿವೃತ್ತಿ ಪಡೆದು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು.

‘ವ್ಯವಹಾರದ ಸಲುವಾಗಿ ಸೆ.19 ರಂದು ದೇವನಹಳ್ಳಿ ತಾಲ್ಲೂಕು ಕಚೇರಿ ಬಳಿ ಬಂದಿದ್ದೆ. ಸ್ನೇಹಿತರಾದ ವಿಜಯ್ ಹಾಗೂ ರಾಜನ್ ಜತೆ ರಾತ್ರಿ 7.30ರವರೆಗೆ ಮಾತುಕತೆ ನಡೆಸಿ, ಅವರ ಕಾರಿನಲ್ಲೇ (ಕೆಎ 05–ಎಂಡಬ್ಲ್ಯೂ 7769) ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದೆ. ದೇವನಹಳ್ಳಿ ರೈಲ್ವೆ ಟ್ರ್ಯಾಕ್‌ ಬಳಿ ಹೋಗುತ್ತಿದ್ದಾಗ, ಏಕಾಏಕಿ ಬೊಲೆರೋ ಜೀಪೊಂದು ನಮ್ಮ ಕಾರಿನ ಮುಂದೆ ಬಂದು ನಿಂತಿತು. ಮುಂಭಾಗದ ಗಾಜಿನ ಮೇಲೆ ‘ಪೊಲೀಸ್’ ಎಂಬ ಸ್ಟಿಕ್ಕರ್ ಇತ್ತು’ ಎಂದು ಧರಣಿದರನ್ ದೂರಿದ್ದಾರೆ.

ADVERTISEMENT

‌‘ಪೊಲೀಸ್ ಸಮವಸ್ತ್ರದಲ್ಲಿದ್ದ ನಾಲ್ವರು ಆ ಜೀಪಿನಿಂದ ಇಳಿದು ಬಂದು, ನಮ್ಮನ್ನು ಕಾರಿನಿಂದ ಕೆಳಗಿಳಿಸಿದರು. ಒಬ್ಬಾತ ನಮ್ಮ ಕಾರು ತೆಗೆದುಕೊಂಡು ಹೊರಟು ಹೋದ. ಉಳಿದವರು, ‘ವಿಚಾರಣೆ ಮಾಡಬೇಕು ಬನ್ನಿ’ ಎಂದು ಜೀಪಿನಲ್ಲಿ ಹತ್ತಿಸಿಕೊಂಡರು. ಬಳಿಕ ಹಿಗ್ಗಾಮುಗ್ಗಾ ಥಳಿಸಿ ₹5,000 ನಗದು, ಎಟಿಎಂ ಕಾರ್ಡ್, ಪಿಸ್ತೂಲ್‌ನ ಲೈಸೆನ್ಸ್ ಪ್ರತಿ ಹಾಗೂ ಮೊಬೈಲ್‌ಗಳನ್ನು ಕಿತ್ತುಕೊಂಡರು. ಕೊನೆಗೆ ರಾಜನ್ ಹಾಗೂ ವಿಜಯ್ ಅವರನ್ನು ಅಲ್ಲೇ ಬಿಟ್ಟ ಅವರು, ನನ್ನ ಬಳಿ ಪಿಸ್ತೂಲ್ ಇದ್ದುದರಿಂದ ಜೀಪಿನಲ್ಲಿ ಕರೆದೊಯ್ದರು.’

‘ಮಾರ್ಗಮಧ್ಯೆ ಆ ಪಿಸ್ತೂಲನ್ನೂ ಕಿತ್ತುಕೊಂಡು ನನಗೆ ಚಿತ್ರಹಿಂಸೆ ಕೊಟ್ಟರು. ರಾತ್ರಿ 11 ಗಂಟೆವರೆಗೂ ನಗರ ಸುತ್ತಾಡಿಸಿ, ಕೊನೆಗೆ ವಿಜಯಪುರ ಬೈಪಾಸ್‌ನ ‘ನಂದಿತಾ ರೆಸ್ಟೋರೆಂಟ್’ ಬಳಿ ವಾಹನದಿಂದ ತಳ್ಳಿ ಹೊರಟು ಹೋದರು. ಸಾರ್ವಜನಿಕರ ನೆರವಿನಿಂದ ವಿಜಯಪುರ ಠಾಣೆಗೆ ತೆರಳಿದೆ. ಆದರೆ, ‘ಕೃತ್ಯ ನಡೆದ ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ದೇವನಹಳ್ಳಿ ಠಾಣೆಗೆ ಹೋಗಿ’ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.’

‘ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ನಾನು, ದೇವನಹಳ್ಳಿ ಠಾಣೆವರೆಗೂ ಹೋಗುವ ಸ್ಥಿತಿಯಲ್ಲಿರಲಿಲ್ಲ. ಬೆಂಗಳೂರಿನಲ್ಲೇ ಇದ್ದ ಸಂಬಂಧಿಕರನ್ನು ಸ್ಥಳಕ್ಕೆ ಕರೆಸಿಕೊಂಡು ಊರಿಗೆ ತೆರಳಿದೆ. ಅಲ್ಲಿ ನಾಲ್ಕು ದಿನ ಆಸ್ಪತ್ರೆಗೆ ದಾಖಲಾಗಿದ್ದರಿಂದ ದೂರು ಕೊಡುವುದು ತಡವಾಯಿತು. ಆ ಸುಲಿಗೆಕೋರರನ್ನು ಪತ್ತೆ ಮಾಡಿ, ನನ್ನ ಪಿಸ್ತೂಲ್ ವಾಪಸ್ ಕೊಡಿಸಿ’ ಎಂದು ಧರಣಿದರನ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ಗೃಹರಕ್ಷಕರ ಯೂನಿಫಾರ್ಮ್‌: ‘ನಂದಿನಿ ರೆಸ್ಟೋರೆಂಟ್ ಸೇರಿದಂತೆ ಸುತ್ತಮುತ್ತಲ ಕಟ್ಟಡಗಳ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು, ಆರೋಪಿಗಳು ಗೃಹರಕ್ಷಕರ ಸಮವಸ್ತ್ರ ಧರಿಸಿದ್ದಂತೆ ಕಾಣುತ್ತದೆ. ಧರಣಿದರನ್ ಅವರು ‘ವ್ಯವಹಾರದ ನಿಮಿತ್ತ ಬೆಂಗಳೂರಿಗೆ ಬಂದಿದ್ದೆ’ ಎಂದಷ್ಟೇ ಹೇಳುತ್ತಿದ್ದಾರೆ. ಯಾವ ವ್ಯವಹಾರ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ವಿಜಯ್ ಹಾಗೂ ರಾಜನ್ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.