ಯಲಹಂಕ: `ಹೆಚ್ಚು ಪೌಷ್ಟಿಕ ಗುಣವಿರುವ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪೌಷ್ಟಿಕ ಸ್ಥಿತಿ ಸುಧಾರಣೆಗೆ ಕೃಷಿ ವಿಜ್ಞಾನಿಗಳು ಶ್ರಮಿಸಬೇಕು' ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ಸಹಕಾರ ಇಲಾಖೆಯ ಕಾರ್ಯದರ್ಶಿ ಡಾ.ಆಶಿಷ್ ಬಹುಗುಣ ಸಲಹೆ ನೀಡಿದರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು, ಕೃಷಿ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು, ಭೋದನೆ, ಸಂಶೋಧನೆ ಮತ್ತು ವಿಸ್ತರಣಾ ವಿಭಾಗದ ಮುಖ್ಯಸ್ಥರೊಂದಿಗೆ ನಡೆದ ಸಂವಾದಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
`ನಮ್ಮ ರಾಷ್ಟ್ರ ಆಹಾರದ ಸುಭದ್ರತೆ ಪಡೆದಿದ್ದು, ಪೌಷ್ಟಿಕ ಆಹಾರ ಸುಭದ್ರತೆ ವಿಷಯದಲ್ಲಿ ನಾವು ಸಾಧಿಸಬೇಕಾದುದು ಬಹಳಷ್ಟಿದೆ. ಈ ದಿಸೆಯಲ್ಲಿ ವಿಜ್ಞಾನಿಗಳು ಹೆಚ್ಚಿನ ಪೌಷ್ಟಿಕ ಗುಣವಿರುವ ತಳಿಗಳನ್ನು ಅಭಿವೃದ್ಧಿಪಡಿಸಿ, ಬಿಡುಗಡೆ ಮಾಡಲು ಒತ್ತು ನೀಡಬೇಕು' ಎಂದು ಹೇಳಿದರು.
`ಕೃಷಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಲು ಕೃಷಿ ಉಪಕರಣಗಳ ಬಳಕೆ, ಮಣ್ಣು ಮತ್ತು ನೀರು ಸಂರಕ್ಷಣೆ, ರೈತರಿಗೆ ಎಲೆಕ್ಟ್ರಾನಿಕ್ ತಾಂತ್ರಿಕ ವಿಧಾನಗಳ ಬಗ್ಗೆ ಸೂಕ್ತ ಕಾಲದಲ್ಲಿ ಸೂಕ್ತ ಮಾಹಿತಿ ನೀಡುವುದು ಕೃಷಿ ಅಭಿವೃದ್ಧಿಗೆ ಬಹಳ ಮುಖ್ಯ ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ, ಕೃಷಿ ನಿರ್ದೇಶಕ ಡಾ.ಡಿ.ಪಿ.ಕುಮಾರ್, ಕುಲಸಚಿವ ಡಾ.ಎಚ್.ನಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.
ನಂತರ ಬಹುಗುಣ ಅವರು, ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿವಿಧ ತಾಕುಗಳು ಹಾಗೂ ವಿಭಾಗಗಳಿಗೆ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.