ADVERTISEMENT

ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ತಂತ್ರಜ್ಞಾನ ವಿಫಲ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಬೆಂಗಳೂರು: `ಭೂಕಂಪದಂತಹ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅದನ್ನು ತಡೆಯುವಲ್ಲಿ ಮತ್ತು ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ಎಂಜಿನಿಯರ್‌ಗಳ ಸಾಧನೆ ತೃಪ್ತಿಕರವಾಗಿಲ್ಲ~ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಜಿ.ಸೀತಾರಾಮ್ ವಿಷಾದಿಸಿದರು.

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ) ಮತ್ತು ಕಂದಾಯ ಇಲಾಖೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಜಂಟಿಯಾಗಿ ಬೆಂಗಳೂರು ವಿ.ವಿ.ಯ ಜ್ಞಾನಭಾರತಿ ಆವರಣದಲ್ಲಿ ಬುಧವಾರದಿಂದ ಏರ್ಪಡಿಸಿದ ಮೂರು ದಿನಗಳ, `ಕಟ್ಟಡಗಳ ನಿರ್ಮಾಣದಲ್ಲಿ ಸಾಮರ್ಥ್ಯ, ವಾಸ್ತುಶಿಲ್ಪ ಮತ್ತು ಭೂಕಂಪ ಅನಾಹುತ ತಡೆಯುವಲ್ಲಿ ಎಂಜಿನಿಯರ್‌ಗಳ ಪಾತ್ರ~ ಕುರಿತ ಕಾರ್ಯಾಗಾರದಲ್ಲಿ  ಮಾತನಾಡಿದರು.

`ಎಂಜಿನಿಯರ್‌ಗಳು ಭೂಕಂಪ, ಸುನಾಮಿಗಳಂತಹ ಪ್ರಾಕೃತಿಕ ವೈಪರೀತ್ಯಗಳ ಬಗ್ಗೆ ಯೋಚಿಸುವುದಿಲ್ಲ. ಪಾಕೃತಿಕ ವಿಕೋಪ ತಡೆಗೆ ಸಂಬಂಧಿಸಿದಂತೆ ಅವರು ಪಡೆಯುವ ತರಬೇತಿಯೂ ಕಳಪೆ ಮಟ್ಟದ್ದು. ದುರಂತಗಳನ್ನು ಹೇಗೆ ಕಡಿತಗೊಳಿಸಬೇಕು ಎಂಬ ಬಗ್ಗೆ ತಿಳಿದುಕೊಳ್ಳಬೇಕು~ ಎಂದು ಸಲಹೆ ನೀಡಿದ ಅವರು, ` ಭೂಕಂಪಗಳು ಮನುಷ್ಯರನ್ನು ಸಾಯಿಸುವುದಿಲ್ಲ. ಬದಲಾಗಿ ಕಳಪೆ ಕಟ್ಟಡ ಕಾಮಗಾರಿಗೆ ಬಲಿಯಾಗುತ್ತಾರೆ~ ಎಂದರು.

ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, `ಭಾರತದ ಶೇಕಡಾ 60ರಷ್ಟು ಪ್ರದೇಶ ಭೂಕಂಪಕ್ಕೆ ಒಳಗಾಗುತ್ತದೆ. ಸರ್ಕಾರ ಇದನ್ನು ತಡೆಯಲು ಗುಣಮಟ್ಟದ ಎಂಜಿನಿಯರಿಂಗ್‌ಗೆ ಮಹತ್ವ ನೀಡಬೇಕು. ಪುನರ್‌ನಿರ್ಮಾಣ ಮತ್ತು ಪುನರ್‌ವಸತಿಗಳು ಮುಖ್ಯ ಆದ್ಯತೆಯಾಗಬೇಕು~ ಎಂದರು.

ಯುವಿಸಿಇ ಪ್ರಾಂಶುಪಾಲ ಡಾ.ಕೆ.ಆರ್.ವೇಣುಗೋಪಾಲ್, `ಕಟ್ಟಡ ನಿರ್ಮಾಣದಲ್ಲಿ ಜಪಾನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಭೂಕಂಪನವು ರಿಕ್ಟರ್ ಮಾಪಕದಲ್ಲಿ 7ರಷ್ಟಿದ್ದರೂ ಆ ಮನೆಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ~ ಎಂದು ಹೇಳಿದರು.
 
ಪ್ರಾಧ್ಯಾಪಕರಾದ ಡಾ.ವಿ.ದೇವರಾಜು ಮತ್ತು ಡಾ.ಎಲ್.ಗೋವಿಂದರಾಜು ಅವರು ಮೂರು ದಿನಗಳ ಕಾರ್ಯಾಗಾರದ ವಿವರ ನೀಡಿದರು. ಡಾ.ಎಚ್.ಎನ್.ರಮೇಶ್ ಸ್ವಾಗತಿಸಿದರು. ಡಾ.ಜಯರಾಮಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.