ಬೆಂಗಳೂರು: `ಪ್ರಗತಿಯ ಜತೆಗೆ ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ' ಎಂದು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಡಾ.ಎಸ್.ಎಸ್. ಪ್ರಭು ಹೇಳಿದರು.
ಬೆಂಗಳೂರು ವಿಜ್ಞಾನ ವೇದಿಕೆಯು ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ `36ನೇ ವಾರ್ಷಿಕ ವಿಜ್ಞಾನೋತ್ಸವ' ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
`ನಮ್ಮ ಇಂದಿನ ಯಶಸ್ಸು ಮುಂದಿನ ಸೋಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಎಲ್ಲ ಸಂಪನ್ಮೂಲಗಳು ಬರಿದಾಗುತ್ತಿವೆ. ಒಮ್ಮೆ ಬರಿದಾದರೆ, ಅವುಗಳನ್ನು ಮತ್ತೆ ತುಂಬಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇಂದು ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ' ಎಂದರು.
`ಜಗತ್ತಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಮತ್ತು ಅನೇಕ ಸ್ಪರ್ಧೆಗಳಿಂದ ವಿಶ್ವದ ಶಾಂತಿ ಕದಡುತ್ತಿದೆ. ಇಂದು ಕಂಪ್ಯೂಟರ್, ವೈಜ್ಞಾನಿಕ ಪ್ರಗತಿ, ನಿರ್ವಹಣಾ ಸಾಮರ್ಥ್ಯ ಎಲ್ಲವೂ ಹೆಚ್ಚಾಗಿದೆ. ಇದರಿಂದ ವಿನಾಕಾರಣ ಸ್ಪರ್ಧೆಯು ಬೆಳೆಯುತ್ತಿದೆ' ಎಂದು ಹೇಳಿದರು.
`ತಂತ್ರಜ್ಞಾನವು ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವುದಿಲ್ಲ. ಆದರೆ, ನಮ್ಮ ತಿಳಿವಳಿಕೆಯಿಂದ ತಂತ್ರಜ್ಞಾನವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.