ಬೆಂಗಳೂರು: `ನಮ್ಮ ಮೆಟ್ರೊ~ ನೆಲದಡಿಯ ನಿರ್ಮಾಣ ಕಾಮಗಾರಿಗಾಗಿ ವಿಧಾನಸೌಧದ ಮುಂದೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಮಾಡಲು ಸರ್ಕಾರ ಇನ್ನೂ ಒಪ್ಪಿಗೆ ನೀಡದೇ ಇರುವುದರಿಂದ ಈ ಸ್ಥಳದಲ್ಲಿ ಯೋಜನೆಯ ಅನುಷ್ಠಾನವು ಆರು ತಿಂಗಳ ಕಾಲ ವಿಳಂಬವಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು ತಿಳಿಸಿದೆ.
ಸೋಮವಾರ ಪ್ರಕಟಿಸಿರುವ ವಾರ್ತಾಪತ್ರದಲ್ಲಿ ನಿಗಮವು ಈ ವಿಷಯ ತಿಳಿಸಿದ್ದು, `ಪ್ರತಿಮೆ ಇರುವ ಜಾಗವು ಆಯಕಟ್ಟಿನ ಸ್ಥಳವಾಗಿದೆ~ ಎಂದು ಹೇಳಿದೆ.`ರೈಲ್ವೆ ಇಲಾಖೆಗೆ ಸೇರಿದ ಜಾಗಗಳಲ್ಲಿ ಅನುಮತಿ ನೀಡುವಂತೆ ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಿಗೆ ರೈಲ್ವೆ ಸಚಿವಾಲಯವು ನಿರ್ದೇಶನ ನೀಡಿದೆ. ಆದರೆ ಇನ್ನೂ ಅಧಿಕೃತ ಒಪ್ಪಿಗೆ ಪತ್ರ ಬಂದಿಲ್ಲ.
ರೈಲ್ವೆ ಸಚಿವಾಲಯದ ಸೂಚನೆ ಮೇರೆಗೆ ನೈರುತ್ಯ ರೈಲ್ವೆ ಅಧಿಕಾರಿಗ ಳೊಂದಿಗೆ ಇತ್ತೀಚೆಗೆ ನಗರದಲ್ಲಿ ಸಭೆ ನಡೆಸಲಾಯಿತು. ಈ ತಿಂಗಳ 30ರಂದು ದೆಹಲಿಯಲ್ಲಿ ಮುಂದಿನ ಸಭೆ ನಡೆಯ ಲಿದೆ~ ಎಂದು ವಿವರಿಸಲಾಗಿದೆ.
`ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸ್ವಾಧೀನ ಪಡಿಸಿಕೊಂಡಿರುವ ಜಾಗಕ್ಕೆ ಪರಿಹಾರದ ಹಣ ನೀಡದೇ ಇರುವ ವಿಚಾರವು ಹೈಕೋರ್ಟ್ನಲ್ಲಿ ಇರುವುದ ರಿಂದ ಪೀಣ್ಯದಲ್ಲಿ ಕಾಮಗಾರಿ ಸ್ಥಗಿತ ಗೊಂಡಿದೆ.
ಮಿನ್ಸ್ಕ್ ಚೌಕ ಮತ್ತು ಸಾಬೂನು ಕಾರ್ಖಾನೆ ಸಮೀಪದ ಭೂ ಸ್ವಾಧೀನ ಸಂಬಂಧದ ಪ್ರಕರಣಗಳು ಕೋರ್ಟ್ನಲ್ಲಿ ಇತ್ಯರ್ಥವಾಗಬೇಕಿರುವು ದರಿಂದ ಅಲ್ಲಿಯೂ ಕಾಮಗಾರಿ ತಡವಾ ಗುತ್ತಿದೆ~ ಎಂದು ತಿಳಿಸಲಾಗಿದೆ.
ಚೆನ್ನೈಗೆ ಬಂದ ಯಂತ್ರ: ಸಂಪಿಗೆ ರಸ್ತೆಯಿಂದ ಕೆ.ಆರ್.ರಸ್ತೆವರೆಗೆ ಉತ್ತರ -ದಕ್ಷಿಣ ಕಾರಿಡಾರ್ನ ಸುರಂಗ ಮಾರ್ಗ ನಿರ್ಮಿಸಲು ಚೀನಾದಿಂದ ಆಮದು ಮಾಡಿಕೊಂಡಿರುವ `ಟನೆಲ್ ಅರ್ಥ್ ಪ್ರೆಷರ್ ಬ್ಯಾಲೆನ್ಸ್ ಬೋರಿಂಗ್ ಮೆಷಿನ್~ ಚೆನ್ನೈ ಬಂದರನ್ನು ತಲುಪಿದೆ. ಏಪ್ರಿಲ್ 2ನೇ ವಾರದಲ್ಲಿ ನಗರಕ್ಕೆ ಬರಲಿದೆ.
ವಿಶ್ವಕರ್ಮ ಪ್ರಶಸ್ತಿ: ಆರ್ವಿ ರಸ್ತೆಯಿಂದ ಪುಟ್ಟೇನಹಳ್ಳಿವರೆಗಿನ ರೀಚ್ 4ಎ ಮಾರ್ಗದಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಪರಿಸರ ಸ್ನೇಹಿ ನಿರ್ಮಾಣ ಕಾಮಗಾರಿ ವಾತಾವರಣಕ್ಕಾಗಿ ಜೆಎಂಸಿ ಪ್ರಾಜೆಕ್ಟ್ಸ್ ಕಂಪೆನಿಗೆ ಕನ್ಸಟ್ರಕ್ಷನ್ ಇಂಡಸ್ಟ್ರಿ ಡೆವಲಪ್ಮೆಟ್ ಕೌನ್ಸಿಲ್ನ ವಿಶ್ವಕರ್ಮ ಪ್ರಶಸ್ತಿ ದೊರೆತಿದೆ.
39.30 ಲಕ್ಷ ಪ್ರಯಾಣಿಕರು, 5.83 ಕೋಟಿ ಸಂಗ್ರಹ
`ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ `ನಮ ಮೆಟ್ರೊ~ದ ರೀಚ್- 1ರ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭವಾಗಿ ಐದು ತಿಂಗಳು ಕಳೆದಿದ್ದು, ಆದಾಯ ಸಂಗ್ರಹದ ಪ್ರಮಾಣವು ತೃಪ್ತಿಕರವಾಗಿದೆ~ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು ತಿಳಿಸಿದೆ.
`ನಗರದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ಮಾರ್ಚ್ 17ಕ್ಕೆ 150 ದಿನಗಳು ತುಂಬಿತು. ಅಲ್ಲಿಯವರೆಗೆ 39.30 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಓಡಾಡಿದ್ದಾರೆ. ರೂ 5.83 ಕೋಟಿ ಆದಾಯ ಸಂಗ್ರಹವಾಗಿದೆ~ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.