ADVERTISEMENT

‍ಪ್ರತ್ಯೇಕ ಪ್ರಕರಣ; ಮಹಿಳೆಯರು ಸೇರಿ ಐದು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 19:31 IST
Last Updated 14 ಏಪ್ರಿಲ್ 2018, 19:31 IST
‍ಪ್ರತ್ಯೇಕ ಪ್ರಕರಣ; ಮಹಿಳೆಯರು ಸೇರಿ ಐದು ಮಂದಿ ಬಂಧನ
‍ಪ್ರತ್ಯೇಕ ಪ್ರಕರಣ; ಮಹಿಳೆಯರು ಸೇರಿ ಐದು ಮಂದಿ ಬಂಧನ   

ಬೆಂಗಳೂರು: ನಗರದ ಪ್ರತ್ಯೇಕ ಕಡೆಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಮಹಿಳೆಯರು ಸೇರಿದಂತೆ ಐವರು ಆರೋಪಿಗಳನ್ನು ಜೀವನ್‌ಬಿಮಾ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೈಕೊ ಲೇಔಟ್‌ನ ಶಿವರಾಸನ್, ಬೈಯಪ್ಪನಹಳ್ಳಿಯ ಭಾಗ್ಯಲಕ್ಷ್ಮಿ, ಕೆ.ಆರ್‌.ಪುರದ ಜಿ.ಎನ್.ನಾಗೇಶ್, ಮಂಜುಶ್ರೀ ಹಾಗೂ ಮುಂಬೈನ ಸಚಿನ್‌ ಬಂಧಿತರು. ಈ ಆರೋಪಿಗಳ ಬಂಧನದಿಂದ 33 ಪ್ರಕರಣಗಳು ಪತ್ತೆಯಾಗಿವೆ. ₹70.42 ಲಕ್ಷ ಮೌಲ್ಯದ ಚಿನ್ನದ ಆಭರಣ, ಬೈಕ್‌ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

‘ಇಂದಿರಾನಗರ, ಹಲಸೂರು, ಕೆ.ಜಿ.ಹಳ್ಳಿ, ರಾಮಮೂರ್ತಿನಗರ ಹಾಗೂ ಜೀವನ್‌ಬಿಮಾ ನಗರ ವ್ಯಾಪ್ತಿಯಲ್ಲಿ ಶಿವರಾಸನ್‌ ಕೃತ್ಯ ಎಸಗಿದ್ದ. ಐದು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇತ್ತೀಚೆಗೆ ನಮ್ಮ ಕೈಗೆ ಸಿಕ್ಕಿಬಿದ್ದ. ಆತನಿಂದ ₹28.89 ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಕೆಲಸಕ್ಕಿದ್ದ ಮನೆಯಲ್ಲಿ ಕಳ್ಳತನ: ಮೂರು ತಿಂಗಳಿನಿಂದ ಕಳ್ಳತನ ಎಸಗುತ್ತಿದ್ದ ಭಾಗ್ಯಲಕ್ಷ್ಮಿಯನ್ನು ಬಂಧಿಸಿದ್ದೇವೆ. ಆಕೆಯ ಬಳಿ ₹5 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಸಿಕ್ಕಿವೆ. ಕೆಲಸಕ್ಕಿದ್ದ ಮನೆಯಲ್ಲೇ ಈಕೆ ಕೃತ್ಯ ಎಸಗುತ್ತಿದ್ದಳು ಎಂದರು.

ಇನ್ನೊಂದು ಪ್ರಕರಣದಲ್ಲಿ ಬಂಧಿಸಲಾಗಿರುವ ಸಚಿನ್‌, ತಾನು ಕೆಲಸಕ್ಕಿದ್ದ ಆಭರಣ ಮಳಿಗೆಯಲ್ಲೇ ಕಳ್ಳತನ ಎಸಗಿದ್ದ. ಆತನಿಂದ 400 ಗ್ರಾಂ ಚಿನ್ನದ ಆಭರಣ ಜಪ್ತಿ ಮಾಡಿದ್ದೇವೆ ಎಂದರು.

ಮತ್ತೊಂದು ಪ್ರಕರಣದಲ್ಲಿ, ಆಯುಧ ಸಮೇತ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ನಾಗೇಶ್ ಹಾಗೂ ಮಂಜುಶ್ರೀಯನ್ನು ಬಂಧಿಸಿದ್ದೇವೆ. ಅವರ ಬಳಿ ₹16.18 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಸಿಕ್ಕಿವೆ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.