ಬೆಂಗಳೂರು: ‘ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಪ್ರಸ್ತುತ ಇರುವ ಅನುಚ್ಛೇದ 30(1)ರ ಅಡಿಯೇ ಮಾನ್ಯತೆ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತ ಶಾಲೆಗಳಿಗೆ ಮಾನ್ಯತೆ ನೀಡಲು ರಾಜ್ಯಸರ್ಕಾರ ಆರು ವರ್ಷಗಳಿಂದ ನಾನಾ ತಕರಾರು ತೆಗೆಯುತ್ತಿದೆ. ಜೊತೆಗೆ ಪ್ರತ್ಯೇಕ ಷರತ್ತುಗಳನ್ನು ವಿಧಿಸಿದೆ’ ಎಂದು ದೂರಿದರು.
ಧಾರ್ಮಿಕ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ನಿರ್ದಿಷ್ಟ ಶೇಕಡಾವಾರು ಪ್ರಮಾಣದ ಅದೇ ಸಮುದಾಯದ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬೇಕು ಎಂಬ ಷರತ್ತನ್ನು ರಾಜ್ಯ ಸರ್ಕಾರ ವಿಧಿಸಿದೆ. ಇದನ್ನು ರದ್ದುಗೊಳಿಸಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗ ಆದೇಶಿಸಿತ್ತು. ಜೊತೆಗೆ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಯಾವುದೇ ನಿರ್ಬಂಧವಿಲ್ಲದೆ ಸ್ಥಾನಮಾನ ನೀಡಬೇಕೆಂಬ ಮಾರ್ಗಸೂಚಿ ನೀಡಿತ್ತು ಎಂದರು.
ಆರ್ಟಿಇಗೆ ನಮ್ಮ ಅಭ್ಯಂತರವಿಲ್ಲ: ಅಲ್ಪಸಂಖ್ಯಾತ ಶಾಲೆಗಳು ಕೂಡ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಅಡಿ ಸೀಟು ನೀಡುವಂತೆ ಸಂವಿಧಾನ ತಿದ್ದುಪಡಿ ಮಾಡಿದರೆ, ಆ ಬಗ್ಗೆ ನಮ್ಮದೇನೂ ಅಭ್ಯಂತರವಿಲ್ಲ. ಅಲ್ಪಸಂಖ್ಯಾತ ಮಾನ್ಯತೆ ಹಾಗೂ ಆರ್ಟಿಇ ಸೀಟಿಗೂ ಹೋಲಿಕೆ ಮಾಡಬಾರದು ಎಂದು ಮನವಿ ಮಾಡಿದರು.
‘ಮೇ 2ಕ್ಕೆ ಪಿಯು ತರಗತಿ ಆರಂಭ ಬೇಡ’ : ‘ಮೇ 7ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. ಮೇ 12ಕ್ಕೆ ಚುನಾವಣೆ, 15ರಂದು ಫಲಿತಾಂಶವಿದೆ. ಹೀಗಾಗಿ ಮೇ 2ರಿಂದ ಪಿಯು ತರಗತಿಗಳನ್ನು ಪ್ರಾರಂಭಿಸಬೇಕು ಎಂಬ ಆದೇಶ ಸರಿಯಲ್ಲ. ಉಪನ್ಯಾಸಕರಿಗೂ ಬೇಸಿಗೆ ರಜೆ ಅವಶ್ಯವಿದೆ. ಎಂದು ಪುಟ್ಟಣ್ಣ ಒತ್ತಾಯಿಸಿದರು.
‘ಮೇ 2ಕ್ಕೆ ಪಿಯು ತರಗತಿ ಆರಂಭ ಬೇಡ’
‘ಮೇ 7ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. ಮೇ 12ಕ್ಕೆ ಚುನಾವಣೆ, 15ರಂದು ಫಲಿತಾಂಶ ಹೊರಬೀಳಲಿದೆ. ಹೀಗಾಗಿ ಮೇ 2ರಿಂದ ಪಿಯು ತರಗತಿಗಳನ್ನು ಪ್ರಾರಂಭಿಸಬೇಕು ಎಂಬ ಆದೇಶ ಸರಿಯಲ್ಲ. ಉಪನ್ಯಾಸಕರಿಗೂ ಬೇಸಿಗೆ ರಜೆ ಅವಶ್ಯವಿದೆ. ಪ್ರತಿ ವರ್ಷದಂತೆಯೇ ಮೇ ಕೊನೆಯ ವಾರದಲ್ಲಿ ತರಗತಿಗಳನ್ನು ಆರಂಭಿಸಬೇಕು’ ಎಂದು ಪುಟ್ಟಣ್ಣ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.