ADVERTISEMENT

ಪ್ರಾಕೃತ ವಿವಿ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 20:09 IST
Last Updated 8 ಮಾರ್ಚ್ 2014, 20:09 IST

ಬೆಂಗಳೂರು: ‘ಪ್ರಾಚೀನ ಹಾಗೂ ಸಮೃ­ದ್ಧ­­ವಾದ ಪ್ರಾಕೃತ ಭಾಷೆಗೆ ಸಂಬಂಧಿ­ಸಿ­ದಂತೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಬೇಕು’ ಎಂದು ಹಿರಿಯ ಸಾಹಿತಿ ಹಂಪ ನಾಗ­ರಾಜಯ್ಯ ಒತ್ತಾಯಿಸಿದರು.

ಸಕಲ ಜೈನ ಸಮಾಜವು ಕರ್ನಾಟಕ ಜೈನ ಅಸೋಸಿಯೇಷನ್‌ ಸಹಯೋಗ­ದೊಂದಿಗೆ ನಗರದಲ್ಲಿ ಶನಿವಾರ ಆಯೋ­­­ಜಿಸಿದ್ದ ಅಭಿನಂದನಾ ಸಮಾ­ರಂಭ­­ದಲ್ಲಿ ಮಾತನಾಡಿದರು.

‘ದೇಶದಲ್ಲಿ 14 ಸಂಸ್ಕೃತ ವಿಶ್ವ­ವಿದ್ಯಾ­-ಲ­ಯ­ಗಳಿವೆ. ಶ್ರೀಸಾಮಾನ್ಯ­ರಲ್ಲಿ ಬಳಕೆ­ಯಲ್ಲಿದ್ದ ಪ್ರಾಕೃತ ಭಾಷೆಯ ವಿಶ್ವ­ವಿದ್ಯಾ­ಲ­ಯವೂ ರಾಜ್ಯ­ದಲ್ಲಿ ಸ್ಥಾಪನೆ­ಯಾಗಬೇಕು. ಈ ದಿಸೆ­ಯಲ್ಲಿ ಸರ್ಕಾರ ಚಿಂತನೆ ನಡೆಸಬೇಕು’ ಎಂದರು.
‘ಬುದ್ಧ ಹಾಗೂ ಮಹಾವೀರರ ಬೋಧನೆ­ಗಳು ಪ್ರಾಕೃತ ಭಾಷೆಯ­ಲ್ಲಿದೆ.  ಭಾರತೀಯ ಸಂಸ್ಕೃ­ತಿಯ ಸಾರ ಅಡಗಿರುವ ಪ್ರಾಕೃತ ಭಾಷೆಯ ಅಧ್ಯ­ಯ­ನಕ್ಕೂ ವಿಶ್ವವಿದ್ಯಾ­ಲ­ಯದ ಅಗತ್ಯ ಎದ್ದುಕಾಣುತ್ತಿದೆ’ ಎಂದರು.

‘ಲ್ಯಾಟಿನ್‌, ಗ್ರೀಕ್‌, ಹೀಬ್ರೂ ಭಾಷೆಗಳು ಪ್ರಸ್ತುತ ವ್ಯವಹಾರಿಕ ವಲಯದಲ್ಲಿ ಅಸ್ತಿತ್ವದಲ್ಲಿ ಇಲ್ಲದೇ ಇದ್ದರೂ, ಆಸಕ್ತರು ಕಲಿಯಲು ಅವ­ಕಾಶ ಮಾಡಿಕೊಡಲಾಗಿದೆ. ಪ್ರಾಚೀನ ಉತ್ಕೃಷ್ಟ ಗ್ರಂಥಗಳು ಪ್ರಾಕೃತ ಭಾಷೆ­ಯ­ಲ್ಲಿದ್ದೂ ಅವುಗಳನ್ನು ಅರ್ಥಮಾಡಿ­ಕೊ­ಳ್ಳಬೇಕಾದರೆ ಪ್ರಾಕೃತ ಭಾಷೆಯ ಅರಿವಿನ ಅಗತ್ಯವಿದೆ’ ಎಂದರು.

‘ಜೈನ ಸಮುದಾಯದವರೆಲ್ಲರೂ ಶ್ರೀಮಂತರು ಎಂಬ ತಪ್ಪು ಕಲ್ಪನೆಯಿದೆ. ವಿಜಾಪುರ, ಬಾಗಲಕೋಟೆ, ಚಿಕ್ಕೋಡಿ, ಕೋಲಾರ ಸೇರಿದಂತೆ ಗ್ರಾಮೀಣ  ಪ್ರದೇಶಗಳ ಜೈನ ಸಮುದಾಯ­ದಲ್ಲಿ­ರುವ ಬಡವರ ಸಮಗ್ರ ಅಭಿವೃದ್ಧಿ­ಯಾಗಬೇಕು’ ಎಂದರು.

‘ಸುಶಿಕ್ಷಿತ ಸಮುದಾಯಗಳಲ್ಲಿ  ಜೈನ ಸಮುದಾಯಕ್ಕೆ  ಮೊದಲ ಸ್ಥಾನ ದೊರೆಯುತ್ತದೆ. ಸಚಿವ ಕೆ.ರೆಹಮಾನ್‌ ಖಾನ್‌ ಅವರ ಪ್ರಯತ್ನದಿಂದಾಗಿ ಅಲ್ಪ­ಸಂಖ್ಯಾತ ವರ್ಗಕ್ಕೆ  ಜೈನರು ಸೇರ್ಪಡೆ­ಗೊಂಡಿ­ರುವುದು ಸಂತಸದ ವಿಚಾರ’ ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಕೆ.ರೆಹಮಾನ್‌ಖಾನ್‌, ‘ಹಲವು ವರ್ಷಗಳ ಹೋರಾಟದ ಫಲ­ವಾಗಿ ಜೈನರು ಕೊನೆಗೂ ಅಲ್ಪ­ಸಂಖ್ಯಾತ ಸಮುದಾಯಗಳ ಪಟ್ಟಿ­ಯಲ್ಲಿ ಸೇರ್ಪಡೆಗೊಂಡಿದ್ದಾರೆ’ ಎಂದರು.

‘ಅಲ್ಪಸಂಖ್ಯಾತರಿಗೆ ದೊರೆಯುವ ಸೌಲಭ್ಯ­ಗಳ ಬಗ್ಗೆ ಮಾಹಿತಿ ಪಡೆದು­ಕೊಂಡು, ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಬೇಕು. ಆಗ ಮಾತ್ರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಕ್ಕೆ ಸಾರ್ಥಕವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.