ಬೆಂಗಳೂರು: ಅಳತೆಯಲ್ಲಿ ಮೋಸ ಮಾಡಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಪೆಟ್ರೋಲ್ ಬಂಕ್ ಒಂದರ ಮೇಲೆ ಕಲ್ಲು ತೂರಾಟ ಮಾಡಿ ದಾಂಧಲೆ ನಡೆಸಿರುವ ಘಟನೆ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಸುಂಕದಕಟ್ಟೆಯ ಸಿದ್ದರಾಜು (29), ಅವರ ಸ್ನೇಹಿತರಾದ ಲಗ್ಗೆರೆಯ ರವಿಕುಮಾರ್ (25) ಮತ್ತು ಶೇಖರ್ (28) ಎಂಬುವರನ್ನು ಬಂಧಿಸಿದ್ದಾರೆ. ಬಂಕ್ನಲ್ಲಿ ಪೆಟ್ರೋಲ್ ಖರೀದಿಸಿದ್ದ ಸಿದ್ದರಾಜು, `ಬಂಕ್ನ ಕೆಲಸಗಾರರು ಅಳತೆಯಲ್ಲಿ ವಂಚನೆ ಮಾಡಿದ್ದಾರೆ~ ಎಂದು ಆರೋಪಿಸಿ ಸ್ನೇಹಿತರ ಜತೆ ಸೇರಿ ದಾಂಧಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
`ಘಟನೆಯಲ್ಲಿ ಬಂಕ್ನ ಕಚೇರಿಗೆ ಹಾನಿಯಾಗಿದ್ದು, ಸುಮಾರು 80 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ~ ಎಂದು ಬಂಕ್ನ ವ್ಯವಸ್ಥಾಪಕರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತ: ಸಾವು
ಸರ್ಜಾಪುರ ರಸ್ತೆಯ ದೊಡ್ಡಕನ್ನಲ್ಲಿ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಲಾರಿ ಮತ್ತು ಸೈಕಲ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದೊಡ್ಡಕನ್ನಲ್ಲಿ ಗ್ರಾಮದ ನಿವಾಸಿ ವೀಣಾ (24) ಮೃತಪಟ್ಟವರು. ಮನೆಗೆಲಸ ಮಾಡುತ್ತಿದ್ದ ಅವರು ಸೈಕಲ್ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಲಾರಿ ಚಾಲಕ ಹಿಂದಿನಿಂದ ಅವರ ಸೈಕಲ್ಗೆ ವಾಹನ ಗುದ್ದಿಸಿದ್ದಾನೆ. ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ವೀಣಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.