ಬೆಂಗಳೂರು: `ಬರಹ ಹಾಗೂ ನಿಲುವಿನಲ್ಲಿ ಪಾರದರ್ಶಕತೆ ಹೊಂದಿದ್ದ ಲಂಕೇಶ್ಸತ್ಯಕ್ಕಾಗಿ ತಮ್ಮ ಜನಪ್ರಿಯತೆಯನ್ನೂ ಕಳೆದುಕೊಳ್ಳಲು ಸಿದ್ಧರಿದ್ದರು' ಎಂದು ವಿಮರ್ಶಕ ಡಾ.ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ `ದೈತ್ಯ ಪ್ರತಿಭೆ ಲಂಕೇಶ್ : ಒಂದು ನೆನಪು' ಕಾರ್ಯಕ್ರಮದಲ್ಲಿ `ನನ್ನೊಳಗೆ ಉಳಿದಿರುವ ಲಂಕೇಶ್ ಲೋಕ' ವಿಷಯದ ಬಗ್ಗೆ ಮಾತನಾಡಿದರು. `ಲಂಕೇಶ್ ವ್ಯವಸ್ಥೆಯ ವಿರುದ್ಧ ಧೈರ್ಯವಾಗಿ ಬರೆಯುತ್ತಿದ್ದರು. ವ್ಯವಸ್ಥೆಯ ತಪ್ಪನ್ನು ಚೇಡಿಸಿ, ಆ ತಪ್ಪನ್ನು ತಿದ್ದುವ ಅವರ ಬರಹ ನಿಷ್ಠುರವಾಗಿರುತ್ತಿತ್ತು. ಬದುಕು ಹಾಗೂ ಬರಹದಲ್ಲಿ ರಾಜೀ ಮಾಡಿಕೊಳ್ಳದ ವ್ಯಕ್ತಿತ್ವ ಲಂಕೇಶ್ ಅವರದ್ದಾಗಿತ್ತು' ಎಂದು ನುಡಿದರು.
`ಲಂಕೇಶ್ ಬಹುಮುಖಿ ವ್ಯಕ್ತಿತ್ವ ಹೊಂದಿದ್ದರು. ಅವರ ಸಾಹಿತ್ಯದಲ್ಲಿ ಆಧುನಿಕತೆಯ ನೈತಿಕತೆ ಇದೆ. ಮತೀಯವಾದವನ್ನು ವಿರೋಧಿಸುತ್ತಿದ್ದ ಅವರು ಜಾತ್ಯತೀತವಾದದ ಪ್ರತಿಪಾದಕರಾಗಿದ್ದರು. ಅವರು ಲೇಖಕರು ಮಾತ್ರವಲ್ಲ ಸಾಹಿತ್ಯ, ಚರಿತ್ರೆ ಹಾಗೂ ರಾಜಕೀಯದ ವಿಮರ್ಶಕರಾಗಿದ್ದರು' ಎಂದರು.
`ಲಂಕೇಶ್ ತಮ್ಮ ಬರಹದಲ್ಲಿ ಅಪರೂಪದ ಪದ ಬಳಸುತ್ತ್ದ್ದಿದರು. ಇತರೆ ಲೇಖಕರ ಬರಹಗಳಲ್ಲಿ ಸರಿ-ತಪ್ಪುಗಳನ್ನು ಪರೀಕ್ಷಿಸುತ್ತಿದ್ದರು. ಸಾಮಾಜಿಕ ಕಳಕಳಿಯ ಲೇಖಕರಾಗಿದ್ದರು' ಎಂದು ಅವರು ಹೇಳಿದರು.
`ಮೂಲತಃ ಪ್ರಾಧ್ಯಾಪಕರಾಗಿದ್ದ ಲಂಕೇಶ್ ಪತ್ರಿಕೋದ್ಯಮಕ್ಕೆ ಬಂದ ನಂತರ ಸಾಮಾಜಿಕ ಲೋಕದಲ್ಲಿ ಗುರುತಿಸಿಕೊಂಡರು. ಲಂಕೇಶ್ ಪತ್ರಿಕೆಯ ಮೂಲಕ ಮಾಧ್ಯಮ ಚಿಂತನೆಯ ಮಾದರಿ ಬದಲಿಸಿದರು. ರಾಜ್ಯದ ರಾಜಕೀಯದ ಮೇಲೆ ಅವರು ಪ್ರಭಾವ ಬೀರಿದ್ದರು' ಎಂದರು.
ಉಪನ್ಯಾಸಕಿ ಸಂಜ್ಯೋತಿ ಮತ್ತು ನಿರೂಪಕಿ ಭಾನುಮತಿ ಅವರು `ನೀಲೂ ಪದ್ಯಗಳಲ್ಲಿ ಸ್ತ್ರೀ ಲೋಕ' ವಿಷಯದ ಬಗ್ಗೆ ಸಂವಾದ ನಡೆಸಿದರು. ರಂಗಕರ್ಮಿ ಮೌನೇಶ ಬಡಿಗೇರ್ ಅವರು ಲಂಕೇಶ್ ಅವರ `ಗುಣಮುಖ' ನಾಟಕದ ಹಕೀಮ್ ಮತ್ತು ನಾದಿರ್ ಮುಖಾಮುಖಿ ಸಂದರ್ಭದ ಆಯ್ದ ಭಾಗಗಳನ್ನು ವಾಚಿಸಿದರು. ನಂತರ ಲಂಕೇಶ್ ನಡೆಸಿದ್ದ ಸಮಾಜವಾದಿ ಚಿಂತಕ ಕೆ.ರಾಮದಾಸ್ ಸಂದರ್ಶನದ ವಿಡಿಯೊ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.