ADVERTISEMENT

ಬಾಗಿಲ ಬಳಿ ಶವ ಎಸೆದಿದ್ದರು!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:59 IST
Last Updated 1 ಮಾರ್ಚ್ 2018, 19:59 IST

ಬೆಂಗಳೂರು: ಮುರುಗೇಶಪಾಳ್ಯದಲ್ಲಿ ಸಂಜೀವ್ (34) ಎಂಬುವರನ್ನು ಕೊಲೆಗೈದ ಆರೋಪದಡಿ ಅವರ ಪತ್ನಿ ಗೀತಾ ಕಡಿಯಾಲ್ (30) ಹಾಗೂ ಆಕೆಯ ಸ್ನೇಹಿತ ಮೊಹಿಬುಲ್ ಇಸ್ಲಾಂನನ್ನು (28) ಪೊಲೀಸರು ಬಂಧಿಸಿದ್ದಾರೆ.

ಫೆ. 23ರಂದು ತಡರಾತ್ರಿ ಪತಿಗೆ ಕಂಠಪೂರ್ತಿ ಮದ್ಯ ಕುಡಿಸಿದ್ದ ಪತ್ನಿ, ಅವರು ಪ್ರಜ್ಞೆ ತಪ್ಪಿದ ನಂತರ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿ
ದ್ದಳು. ಬಳಿಕ ಅವರಿಬ್ಬರು ಸೇರಿ ಸಂಜೀವ್‌ ಅವರ ಕತ್ತು ಹಿಸುಕಿ ಬಾಗಿಲ ಬಳಿ ಎಸೆದು ಪರಾರಿಯಾಗಿದ್ದರು.

ಬಾಗಿಲ ಬಳಿ ಬಿದ್ದಿದ್ದ ಸಂಜೀವ್‌ ಅವರನ್ನು ಮರುದಿನ ಬೆಳಿಗ್ಗೆ ಕಂಡ ಸ್ಥಳೀಯರು, ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಆಕೆಯೇ ಪತಿಯನ್ನು ಆಸ್ಪತ್ರೆ ಕರೆದೊಯ್ದಿದ್ದಳು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿದ್ದನ್ನು ಖಾತ್ರಿಪಡಿಸಿದ್ದರು. ಜತೆಗೆ, ಯಾರೋ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದರು.

ADVERTISEMENT

(ಮೊಹಿಬುಲ್)

ವೈದ್ಯರೇ ಜೀವನ್‌ಬಿಮಾ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ಬಂದಿದ್ದ ಪೊಲೀಸರಿಗೆ ಹೇಳಿಕೆ ನೀಡಿದ್ದ ಗೀತಾ, ‘ನನ್ನ ಗಂಡನನ್ನು ಯಾರೋ ದ್ವೇಷದಿಂದ ಕೊಲೆ ಮಾಡಿದ್ದಾರೆ’ ಎಂದ್ದಿದ್ದಳು.

(ಗೀತಾ)

ಮೊಬೈಲ್‌ ನೀಡಿದ ಸುಳಿವು: ‘ಆರಂಭದಲ್ಲಿ ಪತ್ನಿ ಮೇಲೆ ಅನುಮಾನ ಬಂದಿರಲಿಲ್ಲ. ಹಲವರ ವಿಚಾರಣೆ ನಂತರವೂ ಕೊಲೆ ಮಾಡಿದ್ದು ಯಾರು ಎಂಬುದು ಗೊತ್ತಾಗಲಿಲ್ಲ. ಮೃತರ ಹಾಗೂ ಪತ್ನಿಯ ಮೊಬೈಲ್‌ ಲೋಕೇಶನ್‌ ತಿಳಿದುಕೊಂಡೆವು. ಕೊಲೆ ನಡೆದ ರಾತ್ರಿ ಎರಡೂ ಮೊಬೈಲ್‌ಗಳು ಒಂದೇ ಕಡೆ ಇದ್ದದ್ದು ಗೊತ್ತಾಯಿತು. ಅದೇ ಆಧಾರದಲ್ಲಿ ಪತ್ನಿಯನ್ನು ವಶಕ್ಕೆ ಪ‍ಡೆದು ವಿಚಾರಣೆ ನಡೆಸಿದಾಗಲೇ ಕೊಲೆ ವಿಷಯ ಬಾಯ್ಬಿಟ್ಟಳು’ ಎಂದು ಪೊಲೀಸರು ತಿಳಿಸಿದರು.

‘ಅಸ್ಸಾಂನ ಸಂಜೀವ್‌, ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. 10 ವರ್ಷಗಳ ಹಿಂದೆ ಅಸ್ಸಾಂನವಳೇ ಆದ ಗೀತಾಳನ್ನು ಮದುವೆಯಾಗಿದ್ದರು. ಆಕೆ ನಗರದ ಚಾಕಲೇಟ್‌ ತಯಾರಿಕೆ ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಯು ಮುರುಗೇಶಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಿದ್ದರು.’

‘ಕೈಗಾರಿಕೆಯಲ್ಲಿ ಗೀತಾಳಿಗೆ ಮೂರು ವರ್ಷಗಳ ಹಿಂದೆ ಅಸ್ಸಾಂನವನೇ ಆದ ಮೊಹಿಬುಲ್ ಪರಿಚಯವಾಗಿತ್ತು. ಬಳಿಕ ಅವರಿಬ್ಬರ ನಡುವೆ ಸಲುಗೆ ಬೆಳೆದು, ಆಗಾಗ ಆಕೆಯ ಮನೆಗೂ ಆತ ಬಂದು ಹೋಗುತ್ತಿದ್ದ. ಇತ್ತೀಚೆಗೆ ಅವರಿಬ್ಬರ ಸಲುಗೆ ವಿಷಯ ಪತಿಗೂ ಗೊತ್ತಾಗಿತ್ತು. ಆತನ ಸಂಗ ಬಿಡುವಂತೆ ಎಚ್ಚರಿಸಿದ್ದರು. ಆ ಸಂಬಂಧ ದಂಪತಿ ನಡುವೆ ಜಗಳವೂ ಆಗುತ್ತಿತ್ತು. ಅದೇ ಕಾರಣಕ್ಕೆ ಸ್ನೇಹಿತನ ಜತೆ ಸೇರಿಕೊಂಡು ಈ ಹತ್ಯೆ ಮಾಡಿದ್ದಾಳೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.