ADVERTISEMENT

ಬಿಎಂಟಿಸಿ ಪ್ರಯಾಣಿಕರ ಅಸಮಾಧಾನ: ಸಂಚಾರ ನಿಯಂತ್ರಕರ ಕೊಠಡಿಗೆ ಬೀಗ!

​ಪ್ರಜಾವಾಣಿ ವಾರ್ತೆ
Published 17 ಜೂನ್ 2012, 19:30 IST
Last Updated 17 ಜೂನ್ 2012, 19:30 IST

ಕೃಷ್ಣರಾಜಪುರ: ಇಲ್ಲಿನ ಬಿಎಂಟಿಸಿ ನಿಲ್ದಾಣದಿಂದ 150ಕ್ಕೂ ಹೆಚ್ಚು ಬಸ್ಸುಗಳು ಕೇಂದ್ರ ನಿಲ್ದಾಣಗಳ ಕಡೆಗೆ ಹೊರಡುತ್ತವೆ. ಆದರೆ, ನಿಲ್ದಾಣದ ಆವರಣದಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ಜತೆಗೆ ಸಂಚಾರ ನಿಯಂತ್ರಕರ ಕೊಠಡಿಗೂ ಹತ್ತು ದಿನಗಳಿಂದ ಬೀಗ ಜಡಿದಿರುವುದು ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

`ಯಾವ ಬಸ್ಸು ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಎನ್ನುವುದರ ಬಗ್ಗೆ ನಮಗೆ ಅರಿವಿಲ್ಲ. ಓದು ಬರಹವೂ ಗೊತ್ತಿಲ್ಲ. ಮಾಹಿತಿ ನೀಡುವವರೂ ಇಲ್ಲ. ಹೀಗಾಗಿ ಬೀಗ ಜಡಿದಿರುವ ಕೊಠಡಿ ಕಾಯುವ ಪರಿಸ್ಥಿತಿ ಎದುರಾಗಿದೆ~ ಎಂದು ತರಕಾರಿ ಮಾರುವ ಸುವರ್ಣಮ್ಮ ದೂರಿದರು.

`ಆವರಣದಲ್ಲಿ ಶೌಚಾಲಯದ ಕೊರತೆ ಇದೆ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಬಿಸಿಲು ಮಳೆಯಲ್ಲೂ ಆವರಣದಲ್ಲಿಯೇ ಬಸ್ಸಿಗಾಗಿ ಎದುರು ನೋಡುವ ದಾರುಣ ಪರಿಸ್ಥಿತಿ ಒದಗಿದೆ. ಈಗ ಬಸ್ ಸಂಚಾರದ ಬಗ್ಗೆ ನಮಗೆ ಮಾಹಿತಿ ನೀಡುವವರೂ ಇಲ್ಲದೆ ತ್ರಿಶಂಕು ಸ್ಥಿತಿಯಾಗಿದೆ~ ಎಂದು ಪ್ರಯಾಣಿಕ ವೇಣುಗೋಪಾಲ್ ದೂರಿದರು.

`ಸ್ಥಳೀಯ ಬಸ್ ನಿಲ್ದಾಣಕ್ಕೆ ಹೋಲಿಸಿದರೆ ನಮ್ಮ ಗ್ರಾಮಾಂತರ ಪ್ರದೇಶದ ಬಸ್ ನಿಲ್ದಾಣ ಎಷ್ಟೋ ಮೇಲು. ಸುಸಜ್ಜಿತವಾದ ಕೊಠಡಿ ಇದ್ದು ನಮಗೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ ಇಲ್ಲಿ ಪ್ರಯಾಣಿಕರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ~ ಎಂದು ರಾಮನಗರದ ಅನಂತಯ್ಯ ಅವರು ನುಡಿದರು.

ಅವ್ಯವಸ್ಥೆಯ ಬಗ್ಗೆ ಹೆಸರು ಬಹಿರಂಗಪಡಿಸಲು ಬಯಸದ ನಿರ್ವಾಹಕರೊಬ್ಬರು, `ವಿದ್ಯಾರ್ಥಿಗಳಿಗೆ ಪಾಸ್ ನೀಡುವ ಕೌಂಟರುಗಳಿಗೆ ಇಲ್ಲಿ ಕೆಲಸ ಮಾಡುವ ಇಬ್ಬರು ಸಂಚಾರ ನಿಯಂತ್ರಕರನ್ನು ವರ್ಗಾಯಿಸಲಾಗಿದೆ. ಇದರಿಂದ ನಿಯಂತ್ರಕರ ಕೊಠಡಿಗೆ ಬೀಗ ಜಡಿಯಲಾಗಿದೆ. ಈ ಅವ್ಯವಸ್ಥೆ ಎಷ್ಟು ದಿನಗಳವರೆಗೆ ಮುಂದುವರೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ~ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.