ADVERTISEMENT

ಬಿಎಸ್‌ವೈ ರಕ್ಷಣೆಯ ಉದ್ದೇಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:40 IST
Last Updated 12 ಜನವರಿ 2012, 19:40 IST

ಬೆಂಗಳೂರು: `ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರಕ್ಷಿಸುವ ದೃಷ್ಟಿಯಿಂದಲೇ ನೂತನ ಲೋಕಾಯುಕ್ತರ ನೇಮಕಾತಿಯನ್ನು ಸರ್ಕಾರ ವಿಳಂಬ ಮಾಡುತ್ತಿದೆ~ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಸ್ವಾಮಿ ವಿವೇಕಾನಂದರ 150ನೇ ಜನ್ಮದಿನದ ಅಂಗವಾಗಿ ವಸಂತ ನಗರದಸರ್ದಾರ್ ಪಟೇಲ್ ಭವನದಲ್ಲಿ ಯುವ ಕಾಂಗ್ರೆಸ್ ಗುರುವಾರ ಆಯೋಜಿಸಿದ್ದ `ಯುವ ದಿನಾಚರಣೆ~ಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹಿಂದೆ ಯಾವ ಕಾರಣಕ್ಕೆ ಶಿವರಾಜ್ ಪಾಟೀಲ ಲೋಕಾಯುಕ್ತರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೊ, ಅದೇ ರೀತಿಯ ಆರೋಪಗಳು ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ವಿರುದ್ಧವೂ ಕೇಳಿ ಬಂದಿವೆ. ಹೀಗಾಗಿ ಲೋಕಾಯುಕ್ತ ಸ್ಥಾನಕ್ಕೆ ಅವರನ್ನು ನೇಮಕ ಮಾಡುವುದಿಲ್ಲ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಸ್ಪಷ್ಟವಾಗಿ ಹೇಳಿದ್ದಾರೆ.

ಇಷ್ಟಾದರೂ ಸರ್ಕಾರ ಅವರನ್ನೇ ನೇಮಕ ಮಾಡಬೇಕು ಎಂದು ಹಠ ಹಿಡಿದಿರುವುದನ್ನು ನೋಡಿದರೆ,  ಯಡಿಯೂರಪ್ಪ ಅವರನ್ನು ರಕ್ಷಿಸುವ ಉದ್ದೇಶ ಸ್ಪಷ್ಟವಾಗುತ್ತದೆ. ವಿಚಾರಣೆ ದುರ್ಬಲಗೊಳಿಸುವ ಹುನ್ನಾರಿದೆ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, ಶಾಸಕರಾದ ದಿನೇಶ್ ಗುಂಡೂರಾವ್, ಎನ್.ಎ. ಹ್ಯಾರಿಸ್, ವಿಧಾನ ಪರಿಷತ್ ಸದಸ್ಯರಾದ ವಿ.ಆರ್. ಸುದರ್ಶನ್, ವೀರಣ್ಣ ಮತ್ತಿಕಟ್ಟಿ   ಪಾಲ್ಗೊಂಡಿದ್ದರು.

`ಮತ್ತೆ ತಿರುಗಿಬೀಳುತ್ತಾರೆ~: ಶೇಷಾದ್ರಿ ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಆಯೋಜಿಸಲಾಗಿದ್ದ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಿಂತ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, `ಸಂಘ ಪರಿವಾರದ ಪ್ರಮುಖರ ಮಧ್ಯಸ್ಥಿಕೆ ಕಾರಣ ಯಡಿಯೂರಪ್ಪ ಶಾಂತರಾಗಿದ್ದಾರೆ. ಮತ್ತೆ ಮುಖ್ಯಮಂತ್ರಿ ಯಾಗುವ ಕನಸು ಕಾಣುತ್ತಿರುವ ಅವರು ಸದ್ಯದಲ್ಲಿಯೇ ತಿರುಗಿಬೀಳುತ್ತಾರೆ~ ಎಂದರು.

ಯಡಿಯೂರಪ್ಪ ಸುಮ್ಮನಿರುವ ಮನುಷ್ಯ ಅಲ್ಲ. ಅವರು ಅಧಿಕಾರಕ್ಕಾಗಿ ಹಾತೊರೆಯುತ್ತಿರುತ್ತಾರೆ. ಬಿಜೆಪಿಆಂತರಿಕ ಕಚ್ಚಾಟದಿಂದ  ಅಭಿವೃದ್ಧಿ ಇಲ್ಲದಂತಾಗಿದೆ ಎಂದು ಟೀಕಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.