ADVERTISEMENT

ಬಿಎಸ್‌ವೈ ವಿರುದ್ಧ ಖಾಸಗಿ ದೂರು: ಇಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಲ್ಲಿಸಿರುವ ನಾಲ್ಕು ಮತ್ತು ಐದನೇ ಖಾಸಗಿ ದೂರುಗಳ ವಿಚಾರಣೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ನಡೆಯಲಿದೆ.

ಬಾಷಾ ಅವರು ಒಟ್ಟು ಐದು ದೂರುಗಳನ್ನು ಸಲ್ಲಿಸಿದ್ದರು. ಈ ಪೈಕಿ ಮೊದಲನೇ ದೂರಿನಲ್ಲಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.

ಈಗಾಗಲೇ ವಿಚಾರಣಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಎರಡು ಮತ್ತು ಮೂರನೇ ದೂರುಗಳ ಬಗ್ಗೆ ವಿಚಾರಣೆ ಈಗಾಗಲೇ ನಡೆಯುತ್ತಿದ್ದು, ಆರೋಪಿಗಳ ಜಾಮೀನು ಅರ್ಜಿಯ ಕುರಿತು ಇದೇ 15ರಂದು ಆದೇಶ ಹೊರಬೀಳಲಿದೆ. ನಾಲ್ಕು ಮತ್ತು ಐದನೇ ದೂರುಗಳ ಬಗ್ಗೆ ನ್ಯಾಯಾಲಯ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಸೋಮವಾರದ ವಿಚಾರಣೆಯ ವೇಳೆ ಸಿರಾಜಿನ್ ಬಾಷಾ ಮತ್ತು ಪ್ರಕರಣದ ಪ್ರಮುಖ ಸಾಕ್ಷಿದಾರರಾಗಿರುವ ವಕೀಲ ಕೆ.ಎನ್.ಬಾಲರಾಜ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಎರಡೂ ಪ್ರಕರಣಗಳಲ್ಲಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿದ ಬಳಿಕ ನ್ಯಾಯಾಲಯ ತನ್ನ ತೀರ್ಮಾನ ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.