ADVERTISEMENT

ಬಿಜೆಪಿಯಿಂದ ಗಂಗಾಜಲ ವಿತರಣೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಬೆಂಗಳೂರು: ರಾಜ್ಯದಲ್ಲಿನ ನೀರಿನ ಅಭಾವದ ಬಗ್ಗೆ ಗಮನ ಹರಿಸದ ಬಿಜೆಪಿ ಶಾಸಕರು ಗಂಗಾಜಲ ವಿತರಣೆಯ ಮೂಲಕ ಜನರಲ್ಲಿ ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರು ಸೋಮವಾರ ನಗರದ ಆನಂದ್ ರಾವ್ ವೃತ್ತದ ಸಮೀಪದ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕ ನೆ.ಲ.ನರೇಂದ್ರಬಾಬು, `ಯಡಿಯೂರಪ್ಪ ಅವರ ಹೆಸರಿನಲ್ಲಿ ದೇವಾಯಗಳಲ್ಲಿ ಪೂಜೆ ಸಲ್ಲಿಸಿದ್ದರೆ ರಾಜ್ಯಕ್ಕೆ ಬರಗಾಲ ಬರುತ್ತಿರಲಿಲ್ಲ ಹಾಗೂ ಅವರು ಜೈಲು ಸೇರುತ್ತಿರಲಿಲ್ಲ ಎಂದು ಹೇಳಿರುವ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮೌಢ್ಯದ ಪರಮಾವಧಿಯನ್ನು ಮೀರಿದ್ದಾರೆ.
 
ಈಗ ಗಂಗಾಜಲ ವಿತರಣೆಯ ಮೂಲಕ ತಮ್ಮ ಮೌಢ್ಯವನ್ನು ಜನತೆಗೂ ಹಬ್ಬಿಸುತ್ತಿದ್ದಾರೆ. ಗಂಗಾಜಲ ತಂದು ಅದರ ಪಾವಿತ್ರ್ಯತೆಯನ್ನೇ ಹಾಳುಮಾಡಲಾಗಿದೆ~ ಎಂದು ಕಿಡಿಕಾರಿದರು.

`ಲಡ್ಡು ವಿತರಣೆಗೆ ಸೀಮಿತಗೊಂಡಿದ್ದ ಕೃಷ್ಣಯ್ಯ ಶೆಟ್ಟಿ ಅವರ ಮೌಢ್ಯ ಬಿತ್ತುವ ಕಾರ್ಯ ಈಗ ಗಂಗಾಜಲದ ವಿತರಣೆಗೆ ಮುಂದುವರೆದಿದೆ. ಈ ರೀತಿಯ ನಾಟಕಗಳಿಂದ ಬಿಜೆಪಿಯು ಕಳೆದಿರುವ ರಾಜ್ಯದ ಮಾನವನ್ನು ತಿರುಗಿ ತರಲು ಸಾಧ್ಯವಿಲ್ಲ. ಇದೆಲ್ಲ ಜನರ ಕಣ್ಣೊರೆಸುವ ತಂತ್ರ~ ಎಂದು ಅವರು ಆರೋಪಿಸಿದರು.

ನಗರ ಯೂತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎಸ್.ಮನೋಹರ್, ಉಪಾಧ್ಯಕ್ಷ ಡಿ.ಎ.ಪ್ರಮೋದ್ ಶಂಕರ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.