ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಇಲಾಖೆಗಳು ಮತ್ತು ಸರ್ಕಾರದ ಅಧೀನ ಸಂಸ್ಥೆಗಳ ವಕೀಲರಾಗಿ ನೇಮಕಗೊಂಡಿರುವವರನ್ನು ಆ ಹುದ್ದೆಗಳಿಂದ ತೆರವುಗೊಳಿಸಿ, ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇರುವವರಿಗೆ ಅವಕಾಶ ಕಲ್ಪಿಸಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದರು.
ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಘಟಕವು ಶುಕ್ರವಾರ ಆಯೋಜಿಸಿದ್ದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಂ ಮತ್ತು ಇತರೆ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ದಲ್ಲಿ ಅವರು ಮಾತನಾಡಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ವಕೀಲರೇ ಎಲ್ಲ ಇಲಾಖೆ, ಸಂಸ್ಥೆಗಳಲ್ಲಿ ಮುಂದುವರಿದಿದ್ದಾರೆ. ಇದು ಸರಿಯಲ್ಲ. ನಮ್ಮ ಪಕ್ಷದ ತತ್ವ, ಸಿದ್ಧಾಂತ ಒಪ್ಪುವವರಿಗೆ ಮಾತ್ರವೇ ಅವಕಾಶ ನೀಡಬೇಕು. ಹಿಂದೆ ನೇಮಕ ಹೊಂದಿದ ವರನ್ನು ತಕ್ಷಣವೇ ತೆರವು ಮಾಡಿ. ಪಕ್ಷದ ಜೊತೆ ಗುರುತಿಸಿಕೊಂಡಿರುವ ವಕೀಲರಿಗೆ ಅವಕಾಶ ಮಾಡಿಕೊಡಿ’ ಎಂದರು.
ಪಕ್ಷದ ಕಾನೂನು ಘಟಕದ ಸದಸ್ಯರಿಗೆ ನಿಗಮ, ಮಂಡಳಿಗಳಲ್ಲೂ ಅವಕಾಶ ದೊರೆಯಬೇಕು. ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನೇಮಕದಲ್ಲಿ ಒಂದೆರಡು ಸ್ಥಾನಗಳನ್ನು ಅವರಿಗೆ ಮೀಸಲಿಡಬೇಕು. ಆ ಮೂಲಕ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಬೇಕು ಎಂದು ಹೇಳಿದರು.
ಕೋಮುವಾದಿಗಳನ್ನು ದೂರವಿಡಿ: ‘ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಪ್ರಸ್ತಾವಗಳು ಸರ್ಕಾರದ ಮುಂದೆ ಬಂದಾಗ ಎಚ್ಚರಿಕೆ ವಹಿಸ ಬೇಕು. ಯಾವುದೇ ರೀತಿಯ ಕೋಮುವಾದವನ್ನು ಬೆಂಬಲಿಸುವವರು, ಜಾತ್ಯತೀತ ತತ್ವದಲ್ಲಿ ನಂಬಿಕೆ ಇಲ್ಲದವರು ನ್ಯಾಯಮೂರ್ತಿಗಳ ಹುದ್ದೆಗೆ ಬರದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.
ಬೆಂಬಲಕ್ಕೆ ಮನವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಅರ್ಕಾವತಿ ಬಡಾವಣೆಯ ಜಮೀನಿನ ಡಿನೋಟಿಫಿಕೇಷನ್ ವಿಷಯದಲ್ಲಿ ಬಿಜೆಪಿಯವರು ನನ್ನ ಚಾರಿತ್ರ್ಯ ಹರಣಕ್ಕೆ ಯತ್ನಿಸುತ್ತಿದ್ದಾರೆ. ಪಕ್ಷದ ಕಾನೂನು ಘಟಕವು ಸತ್ಯಾಂಶವನ್ನು ಜನರ ಮುಂದೆ ಇರಿಸುವ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಗುಂಪು ಸಮಾಲೋಚನೆ ಆರಂಭ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಸಾಂಸ್ಥಿಕ ಸ್ವರೂಪ, ಸಂವಹನ ಮತ್ತು ರಾಜಕೀಯ ತಂತ್ರಗಾರಿಕೆಯಲ್ಲಿ ಬದಲಾವಣೆಯ ಅಗತ್ಯ ಕುರಿತು ಕೆಪಿಸಿಸಿ ಗುಂಪು ಸಮಾಲೋಚನೆ ಆರಂಭಿಸಿದೆ. ಭಾನುವಾರದವರೆಗೂ ಚರ್ಚೆ ಮುಂದುವರಿಯಲಿದೆ.
ಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಉಪಸ್ಥಿತಿಯಲ್ಲಿ ಚರ್ಚೆ ನಡೆಯಲಿದೆ. ಶುಕ್ರವಾರದ ಸಮಾಲೋಚನೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ 22ಕ್ಕೂ ಹೆಚ್ಚು ಸಚಿವರು, ಹಲವು ಸಂಸದರು ಭಾಗವಹಿಸಿದ್ದರು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸೂಚನೆಯಂತೆ ಈ ಚರ್ಚೆ ಆರಂಭವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.