ಬೆಂಗಳೂರು: ಸ್ವಚ್ಛ ಪರಿಸರದಲ್ಲಿ ಬದುಕುವುದು ನಾಗರಿಕರ ಮೂಲಭೂತ ಹಕ್ಕು ಎಂದು ಹೇಳಿರುವ ಹೈಕೋರ್ಟ್, ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲಿಕೆ ಸದಸ್ಯರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲು ಸಾಧ್ಯವಾಗದಿದ್ದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಸೂಪರ್ಸೀಡ್ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕಾಗುತ್ತದೆ ಎಂಬ ಗಂಭೀರ ಎಚ್ಚರಿಕೆ ನೀಡಿದೆ.
ನಗರದಲ್ಲಿ ತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ದೂರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, ಬಿಬಿಎಂಪಿ ಧೋರಣೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಮಸ್ಯೆ ಪರಿಹರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಇದೇ 5ರೊಳಗೆ ವರದಿ ಸಲ್ಲಿಸುವಂತೆ ಪೀಠ, ಬಿಬಿಎಂಪಿಗೆ ಶುಕ್ರವಾರ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಹಾಜರಿದ್ದರು. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, `ನಿಮಗೆ ಬೇರೆ ಯಾವ ಕೆಲಸ ಇದೆಯೋ ನಮಗೆ ತಿಳಿದಿಲ್ಲ. ಆದರೆ, ನಗರವನ್ನು ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸುವುದು ನಿಮ್ಮ ಪ್ರಾಥಮಿಕ ಕರ್ತವ್ಯ. ಈ ಸಮಸ್ಯೆ ಪರಿಹರಿಸುವ ಸಂಬಂಧ ನಿಮ್ಮ ವಿವರಣೆ, ಕೇಳಿಸಿಕೊಳ್ಳಲು ಚೆನ್ನಾಗಿದೆ. ಆದರೆ ತ್ಯಾಜ್ಯ ವಿಲೇವಾರಿ ಸೂಕ್ತವಾಗಿ ಆಗುತ್ತಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿತು.
`ನ. 15ರ ವೇಳೆ ಪರಿಹಾರ~: ನ್ಯಾಯಪೀಠದ ಆಕ್ರೋಶಕ್ಕೆ ಗುರಿಯಾದ ಗೋಯಲ್, `ತ್ಯಾಜ್ಯ ವಿಲೇವಾರಿ ಸಂಬಂಧ ಹೊಸದಾಗಿ ಟೆಂಡರ್ ಕರೆಯಲಾಗಿದೆ. ಇದೇ 15ರ ವೇಳೆಗೆ ಅದು ಜಾರಿಗೆ ಬರಲಿದೆ. ಆಗ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಯುತ್ತದೆ. ಬಕ್ರೀದ್ ಮತ್ತು ದಸರಾ ಒಟ್ಟಿಗೇ ಬಂದ ಕಾರಣ, ನಗರದಲ್ಲಿ ತ್ಯಾಜ್ಯದ ಸಮಸ್ಯೆ ತುಸು ಹೆಚ್ಚಾಯಿತು. ಆದರೆ ಇಂದಿನವರೆಗಿನ (ಶುಕ್ರವಾರ) ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ~ ಎಂದು ತಿಳಿಸಿದರು.
`ಮೊದಲೇ ತಿಳಿದಿಲ್ಲವೇ?~: ಈ ಹೇಳಿಕೆಯಿಂದ ಮತ್ತೂ ಕೆಂಡಾಮಂಡಲರಾದ ಮುಖ್ಯ ನ್ಯಾಯಮೂರ್ತಿಗಳು, `ಹಬ್ಬದ ಕಾರಣ ತ್ಯಾಜ್ಯದ ಸಮಸ್ಯೆ ಹೆಚ್ಚಾಯಿತು ಎಂದು ಹೇಗೆ ಹೇಳುತ್ತೀರಿ? ಹಬ್ಬ ಬರುತ್ತದೆ ಎಂಬುದು ನಿಮಗೆ ಮೊದಲೇ ತಿಳಿದಿರುವುದಿಲ್ಲವೇ? ಇನ್ನು ಕೆಲವು ದಿನಗಳಲ್ಲಿ ದೀಪಾವಳಿ ಹಬ್ಬ ಇದೆ ಎಂಬುದು ನಿಮಗೆ ಗೊತ್ತಿದೆಯಲ್ಲವೇ? ಇಂದಿನವರೆಗಿನ (ಶುಕ್ರವಾರ) ತ್ಯಾಜ್ಯ ವಿಲೇವಾರಿ ಆಗಿದೆ ಎನ್ನುತ್ತೀರಿ. ಆದರೆ ಪತ್ರಿಕೆಗಳಲ್ಲಿ ಕಸದ ಗುಪ್ಪೆಯ ಚಿತ್ರಗಳು ಪ್ರಕಟವಾಗಿವೆ. ಅದು ಸುಳ್ಳೇ? ಟಿ.ವಿ. ವಾಹಿನಿಗಳಲ್ಲಿ ತ್ಯಾಜ್ಯದ ಸಮಸ್ಯೆ ಕುರಿತು ಪ್ರಸಾರವಾಗುತ್ತಿರುವ ಮಾಹಿತಿ ಸುಳ್ಳೇ?~ ಎಂದು ಪ್ರಶ್ನಿಸಿದರು.
`ಹೊಸದಾಗಿ ಟೆಂಡರ್ ಕರೆದಿರುವ ಕಾರಣ, ಪಾಲಿಕೆಗೆ 200 ಕೋಟಿ ರೂಪಾಯಿ ಉಳಿತಾಯ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಕೆಲವು ಸ್ವಯಂಸೇವಾ ಸಂಘಟನೆಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ~ ಎಂದು ಗೋಯಲ್ ತಿಳಿಸಿದರು. ಈ ವಿವರಣೆಯಿಂದ ತೃಪ್ತಿಗೊಳ್ಳದ ನ್ಯಾಯಪೀಠ, `ಹಣ ಉಳಿಸಿ ಎಂದು ನಿಮ್ಮಲ್ಲಿ ಯಾರು ಕೋರಿಕೆ ಸಲ್ಲಿಸಿದ್ದಾರೆ? ತ್ಯಾಜ್ಯವೇ ವಿಲೇವಾರಿ ಆಗದಿದ್ದರೆ 200 ಕೋಟಿ ರೂಪಾಯಿ ಉಳಿತಾಯ ಮಾಡಿ ಏನು ಪ್ರಯೋಜನ?~ ಎಂದು ಖಾರವಾಗಿ ಪ್ರಶ್ನಿಸಿತು. `ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೊಮ್ಮೆ ನೀವು ಕೋರ್ಟ್ಗೆ ಹಾಜರಾಗಿದ್ದಾಗ, ಶೀಘ್ರವೇ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದ್ದೀರಿ. ಆದರೆ ಸಮಸ್ಯೆ ಪರಿಹರಿಸಿಲ್ಲ~ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಮಾವಳ್ಳಿಪುರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಗುರುತಿಸಲಾದ ಸ್ಥಳ, ಇನ್ನೆರಡು ದಿನಗಳಲ್ಲಿ ಮುಕ್ತವಾಗುತ್ತದೆ. ಮಂಡೂರಿನಲ್ಲಿ ತ್ಯಾಜ್ಯ ವಿಲೇವಾರಿ ಆಗುತ್ತಿರುವ ಸ್ಥಳದಲ್ಲಿ ಈಗ ಅಂದಾಜು 10 ಲಕ್ಷ ಟನ್ ತ್ಯಾಜ್ಯ ಬಿದ್ದಿದೆ. ಅದನ್ನು ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಈ ಕಾರ್ಯಕ್ಕೆ ಕೆಲವು ಖಾಸಗಿ ಕಂಪೆನಿಗಳು ಆಸಕ್ತಿ ತೋರಿವೆ. ಈ ಬಗ್ಗೆ ತಾಂತ್ರಿಕ ಸಮಿತಿಯೊಂದು ಪರಿಶೀಲನೆ ನಡೆಸುತ್ತಿದೆ ಎಂದು ಗೋಯಲ್ ನ್ಯಾಯಪೀಠಕ್ಕೆ ವಿವರಣೆ ನೀಡಿದರು.
`ಕರುಣೆ ಬೇಡ~: ದೊಡ್ಡ ಹೋಟೆಲ್ಗಳು, ಮಾಲ್ಗಳು, ಕಲ್ಯಾಣ ಮಂಟಪಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆ ಆಗುತ್ತಿದೆ ಎಂದು ಗೋಯಲ್ ನ್ಯಾಯಪೀಠಕ್ಕೆ ತಿಳಿಸಿದರು. `ಯಾರ ಮೇಲೆಯೂ ಕರುಣೆ ತೋರಿಸುವುದು ಬೇಡ. ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುತ್ತಿರುವವರು, ಅದನ್ನು ವಿಲೇವಾರಿ ಸಹ ಮಾಡಬೇಕು~ ಎಂದು ನ್ಯಾಯಪೀಠ ಹೇಳಿತು. ವಿಚಾರಣೆಯನ್ನು ಮುಂದೂಡಲಾಗಿದೆ.
`ಸಮಸ್ಯೆ ಪರಿಹಾರಕ್ಕೆ ಕ್ರಮ~
ಬೆಂಗಳೂರು: ಬೃಹದಾಕಾರವಾಗಿ ಬೆಳೆದಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸುವ ಸಂಬಂಧ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೆಲವು ನೂತನ ಕ್ರಮಗಳನ್ನು ಜಾರಿಗೆ ತರಲಿದೆ.
ನಗರದಲ್ಲಿ ಎಲ್ಲಿ ತ್ಯಾಜ್ಯ ಬಿದ್ದಿದೆ ಎಂಬುದನ್ನು ಸಾರ್ವಜನಿಕರು ಮೊಬೈಲ್ ದೂರವಾಣಿ ಮೂಲಕವೇ ಪಾಲಿಕೆಗೆ ತಿಳಿಸುವ ವ್ಯವಸ್ಥೆ ಇನ್ನು 15 ದಿನಗಳಲ್ಲಿ ಜಾರಿಗೆ ಬರಲಿದೆ.
ತ್ಯಾಜ್ಯ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸುತ್ತಿರುವ ವಿಭಾಗೀಯ ಪೀಠಕ್ಕೆ ಈ ವಿಷಯ ತಿಳಿಸಿದ ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್, `ಈ ವ್ಯವಸ್ಥೆ ಜಾರಿಗೆ ಬಂದ ನಂತರ ಆಂಡ್ರಾಯ್ಡ ಮೊಬೈಲ್ ದೂರವಾಣಿ ಇರುವವರು ತ್ಯಾಜ್ಯ ಬಿದ್ದಿರುವ ಕುರಿತು ಪಾಲಿಕೆಗೆ ಕ್ಷಣಮಾತ್ರದಲ್ಲಿ ಮಾಹಿತಿ ನೀಡಬಹುದು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.