ಬೆಂಗಳೂರು: ಬಿ-ಟ್ರ್ಯಾಕ್ ಯೋಜನೆ ಜಾರಿಯಾದ ನಂತರ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಂದ 194 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ ನಗರ ಯೋಜನೆ ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಟಿ.ಜಿ.ಸೀತಾರಾಮನ್ ಅವರು ಬುಧವಾರ ಪೊಲೀಸ್ ಇಲಾಖೆಗೆ ಸಲ್ಲಿಸಿದ `ಬಿ-ಟ್ರ್ಯಾಕ್ ಯೋಜನೆಯ ಮೌಲ್ಯಮಾಪನ ಹಾಗೂ ಪರಿಣಾಮ ಕುರಿತಾದ ಅಧ್ಯಯನ'ದ ವರದಿಯಿಂದ ಈ ಮಾಹಿತಿ ತಿಳಿದುಬಂದಿದೆ.
2005-06ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕ್ಯಾಮೆರಾ ಅಳವಡಿಕೆ, ಪಥಶಿಸ್ತು ಸೇರಿದಂತೆ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರ ಫಲವಾಗಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 194 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. 2012ರ ವರ್ಷದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ 51 ಲಕ್ಷ ಪ್ರಕರಣಗಳನ್ನು ದಾಖಲಿಸಿಕೊಂಡು 53 ಕೋಟಿ ರೂಪಾಯಿ ದಂಡ ಕಟ್ಟಿಸಿಕೊಳ್ಳಲಾಗಿದೆ.
`ಬಿ-ಟ್ರ್ಯಾಕ್ ಯೋಜನೆ ಜಾರಿಯಾದ ನಂತರ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರಿಗೆ ಅನುಕೂಲವಾಗುತ್ತಿದೆ. ನಿರೀಕ್ಷೆಯಂತೆ ಯೋಜನೆ ಸಫಲಗೊಂಡಿದೆ' ಎಂದು ಸೀತರಾಮನ್ ಸಂತಸ ವ್ಯಕ್ತಪಡಿಸಿದರು.
ಬಿ-ಟ್ರ್ಯಾಕ್ ಯೋಜನೆಯಲ್ಲಿ ಸಣ್ಣ ಪುಟ್ಟ ಬದಲಾವಣೆ ತರುವ ಅಗತ್ಯವಿದೆ.
ನಗರದ ರಸ್ತೆಗಳಲ್ಲಿರುವ ಸೂಚನಾ ಫಲಕಗಳಿಗೆ ಹೊಸ ರೂಪ ನೀಡಬೇಕಿದೆ. ಸಂಚಾರ ನಿಯಮ ಉಲ್ಲಂಘಿಸಿದವರಿಂದ ವಸೂಲಿ ಮಾಡಿದ ದಂಡದ ಹಣವನ್ನು ಸರ್ಕಾರ ಸಂಚಾರ ಪೊಲೀಸ್ ಇಲಾಖೆಗೆ ನೀಡಬೇಕು. ಇಲಾಖೆ ಆ ಹಣದಿಂದ ಯೋಜನೆಯಲ್ಲಿ ಸುಧಾರಣೆ ತರಬಹುದು ಎಂದು ಅವರು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.