ADVERTISEMENT

ಬೇಸಿಗೆಯ ನೀರಿನ ಸಮಸ್ಯೆ ಎದುರಿಸಲು ಬಿಬಿಎಂಪಿ ಸಜ್ಜು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬೆಂಗಳೂರು: ಬೆಂಗಳೂರು ಜಲಮಂಡಳಿಯು ವಿಭಾಗ ಮಟ್ಟದಲ್ಲಿ ವಿಶೇಷ ಅಧಿಕಾರಿಗಳನ್ನು ಅದರಲ್ಲೂ ಮುಖ್ಯವಾಗಿ ಸಹಾಯಕ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ನಿಯೋಜಿಸಿಸುವ ಮೂಲಕ ಈ ವರ್ಷದ ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ಎದುರಿಸಲು ಸಜ್ಜಾಗಿದೆ.

ಈ ವಿಶೇಷಾಧಿಕಾರಿಗಳು ಪ್ರತಿ ದಿನ ಬೆಳಿಗ್ಗೆ 7 ಗಂಟೆಗೆ ಆಯಾಯ ವಿಭಾಗದಲ್ಲಿ ತಪಾಸಣೆ ನಡೆಸುವ ಮೂಲಕ ಗ್ರಾಹಕರಿಗೆ ನೀರು ಪೂರೈಕೆಯಾಗುತ್ತಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.

ಕಳೆದ ವರ್ಷ ನಗರದ ಹಲವು ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜಲಮಂಡಳಿಯ ನಿರೀಕ್ಷಕರೊಬ್ಬರನ್ನು ಸಾರ್ವಜನಿಕರು ಥಳಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಲಮಂಡಳಿ ಈ ಕ್ರಮ ಕೈಗೊಂಡಿದೆ. 

ಈ ವಿಶೇಷಾಧಿಕಾರಿಗಳು ಅಕ್ರಮವಾಗಿ ನೀರಿನ ಕೊಳವೆಯನ್ನು ಅಳವಡಿಸಿರುವವರ ಬಗ್ಗೆಯೂ ನಿಗಾ ವಹಿಸಲಿದ್ದಾರೆ. ಇದರೊಂದಿಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಿಗೆ ನೀರು ಪೂರೈಸುವ ಸಲುವಾಗಿ ಹೊಸ ಟ್ಯಾಂಕರ್ ಖರೀದಿಸಲು ಮಂಡಳಿ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.