ADVERTISEMENT

ಬೈಕ್‌ ಕೊಟ್ಟಿದ್ದ ಪೋಷಕರು ಜೈಲಿಗೆ

ವ್ಹೀಲಿಂಗ್‌ ಪ‍್ರಕರಣ; ಐವರು ಬಾಲಕರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳು
ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳು   

ಬೆಂಗಳೂರು: ಬಾಣಸವಾಡಿ ಬಳಿಯ ಹೊರವರ್ತುಲ ರಸ್ತೆಯಲ್ಲಿ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ಆರೋಪದಡಿ ಐವರು ಬಾಲಕರನ್ನು ಬಂಧಿಸಿರುವ ಪೊಲೀಸರು, ಅವರ ಪೋಷಕರನ್ನೂ ಜೈಲಿಗೆ ಕಳುಹಿಸಿದ್ದಾರೆ.

ಬಂಧಿತ ಬಾಲಕರೆಲ್ಲ ಇಂದಿರಾನಗರ, ಬಾಣಸವಾಡಿಯಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು. ಅವರೆಲ್ಲ 80 ಅಡಿ ರಸ್ತೆಗೆ ಬಂದು ಪೈಪೋಟಿಯಲ್ಲಿ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದರು. ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಸ್ಥಳಕ್ಕೆ ಹೋದ ಪೊಲೀಸರನ್ನು ಕಂಡ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಪೊಲೀಸರು ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ನಾಲ್ವರು ಬಾಲಕರು ತಪ್ಪಿಸಿಕೊಂಡಿದ್ದಾರೆ.

ಬಾಲಕರಿಗೆ ಬೈಕ್‌ ಕೊಟ್ಟಿದ್ದ ಆರೋಪದಡಿ ಪೋಷಕರಾದ ಸಂಪತ್‌ಕುಮಾರ್‌, ಸಯ್ಯದ್‌ ಉಮ್ರಾಜ್‌ ಪಾಷ, ಸಯ್ಯದ್‌ ಅಕ್ರಂ, ಮಹಮ್ಮದ್‌ ನಿಜಾಮ್‌, ಸೈಯದ್‌ ಇಫ್ತಿಯಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. 9 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ADVERTISEMENT

ಟ್ಯೂಷನ್‌ ನೆಪದಲ್ಲಿ ವ್ಹೀಲಿಂಗ್‌ಗೆ: ‘ನಿತ್ಯವೂ ಬೆಳಿಗ್ಗೆ ಕಾಲೇಜು ಹಾಗೂ ಸಂಜೆ ಟ್ಯೂಷನ್‌ಗೆ ಹೋಗುತ್ತಿದ್ದ ವಿದ್ಯಾರ್ಥಿಗಳು, ವಾರಾಂತ್ಯದ ದಿನದಲ್ಲಿ ಹೆಚ್ಚಾಗಿ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದರು. ಪೋಷಕರಿಗೆ ರಜೆ ಇದ್ದ ವೇಳೆಯಲ್ಲಿ, ಟ್ಯೂಷನ್‌ಗೆ ಹೋಗುವುದಾಗಿ ಹೇಳಿ ಅವರ ಬೈಕ್‌ ತೆಗೆದುಕೊಂಡು ಹೋಗುತ್ತಿದ್ದರು.’

‘ಮನೆಯಿಂದ ಹೊರವರ್ತುಲ ರಸ್ತೆಯವರೆಗೂ ವ್ಹೀಲಿಂಗ್‌ ಮಾಡುತ್ತಲೇ ಬಾಲಕರು ಬೈಕ್‌ ಓಡಿಸುತ್ತಿದ್ದರು. 80 ಅಡಿ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ವ್ಹೀಲಿಂಗ್‌ ಮಾಡುತ್ತಿದ್ದರು. ಜತೆಗೆ ಅದಕ್ಕೆ ಅನುಕೂಲವಾಗುವಂತೆ ಬೈಕ್‌ಗಳ ರೂಪವನ್ನು ಬದಲಾಯಿಸಿದ್ದರು. ಈ ಬಗ್ಗೆ ಪೋಷಕರು ಕೇಳಿದಾಗ, ಫ್ಯಾಷನ್‌ ಎಂದು ಸುಮ್ಮನಾಗಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಚಾಲನಾ ಪರವಾನಗಿ ಇಲ್ಲದಿದ್ದರೂ ಪೋಷಕರು ಬಾಲಕರಿಗೆ ಬೈಕ್‌ ನೀಡಿದ್ದಾರೆ. ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಯಾರಾದರೂ ಪೋಷಕರು, ಮಕ್ಕಳಿಗೆ ಬೈಕ್‌ ನೀಡಿದರೆ ಅವರನ್ನೇ ಆರೋಪಿಗಳನ್ನಾಗಿ ಮಾಡುತ್ತೇವೆ’ ಎಂದು ಅವರು ಎಚ್ಚರಿಸಿದರು.  

ನಿಮಿಷದ ಖುಷಿಯಿಂದ ಪ್ರಾಣಕ್ಕೆ ಕುತ್ತು: ‘ಬೈಕ್‌ ವ್ಹೀಲಿಂಗ್‌ನಿಂದ ಸವಾರ ಹಾಗೂ ರಸ್ತೆಯಲ್ಲಿ ಓಡಾಡುವ ಜನರ ಪ್ರಾಣಕ್ಕೆ ಕುತ್ತು ಬರುತ್ತದೆ. ಕೆಲ ನಿಮಿಷ ಖುಷಿಗಾಗಿ ಮಕ್ಕಳು ಇಂಥ ವ್ಹೀಲಿಂಗ್‌ ಮಾಡುತ್ತಿದ್ದು, ಅದಕ್ಕೆ ಪೋಷಕರು ಕಡಿವಾಣ ಹಾಕಬೇಕು’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ ತಿಳಿಸಿದರು.

‘ಪ್ರಮುಖ ರಸ್ತೆ, ಒಳರಸ್ತೆಗಳಲ್ಲಿ ಬಾಲಕರು ವ್ಹೀಲಿಂಗ್‌ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬರುತ್ತಿವೆ. ಅವರನ್ನು ಪತ್ತೆ ಹಚ್ಚಲು ಆಯಾ ಠಾಣೆ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.