ಬೆಂಗಳೂರು: ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ನಗರದ ತುಮಕೂರು ರಸ್ತೆಯ ಸಿಎಂಟಿ ಜಂಕ್ಷನ್ ಸಮೀಪ ಶನಿವಾರ ಸಂಜೆ ನಡೆದಿದೆ.
ಪೀಣ್ಯ ಬಳಿಯ ಟಿ.ದಾಸರಹಳ್ಳಿ ನಿವಾಸಿ ಮುರುಗೇಶ್ (52) ಮೃತಪಟ್ಟವರು. ಫ್ರೇಜರ್ಟೌನ್ನಲ್ಲಿರುವ ಸಹೋದರನ ಮನೆಗೆ ಹೋಗಿದ್ದ ಅವರು ಟಿ.ದಾಸರಹಳ್ಳಿಗೆ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಂಟಿ ಜಂಕ್ಷನ್ ಬಳಿ ಎಡ ತಿರುವು ಪಡೆದುಕೊಳ್ಳುವ ಯತ್ನದಲ್ಲಿದ್ದ ಲಾರಿ ಚಾಲಕ, ಪಕ್ಕದಲ್ಲಿ ಹೋಗುತ್ತಿದ್ದ ಮುರುಗೇಶ್ ಅವರ ದ್ವಿಚಕ್ರ ವಾಹನಕ್ಕೆ ವಾಹನ ಗುದ್ದಿಸಿದ.
ಪರಿಣಾಮ ವಾಹನದಿಂದ ಕೆಳಗೆ ಬಿದ್ದ ಅವರ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವವಾಯಿತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ನಂತರ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.