
ಬೆಂಗಳೂರು: `ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಕಂಡು ಬಂದರೂ ಬ್ಯಾಂಕುಗಳ ಉತ್ತಮ ಕಾರ್ಯವೈಖರಿಯಿಂದ ದೇಶದಲ್ಲಿ ಆರ್ಥಿಕ ಸುಸ್ಥಿರತೆ ಸಾಧಿಸಲು ಸಾಧ್ಯವಾಗಿದೆ' ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.
ಕೆನರಾ ಬ್ಯಾಂಕ್ ನೌಕರರ ಒಕ್ಕೂಟವು ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ 3ನೇ ಅಖಿಲ ಭಾರತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಆಡಳಿತ ಮಂಡಳಿ ಹಾಗೂ ನೌಕರರ ನಡುವೆ ಉತ್ತಮ ಬಾಂಧವ್ಯವಿದ್ದಾಗ ಮಾತ್ರ ಬ್ಯಾಂಕುಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕೆನರಾಬ್ಯಾಂಕ್ ಈ ದಿಸೆಯಲ್ಲಿದ್ದು, ದೇಶದ ಬ್ಯಾಂಕ್ಗಳಲ್ಲಿ ಕೆನರಾ ಬ್ಯಾಂಕ್ ಮುಂಚೂಣಿಯಲ್ಲಿದೆ' ಎಂದು ಶ್ಲಾಘಿಸಿದರು.
`ನೌಕರರರು ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವತ್ತ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕಠಿಣ ಪರಿಶ್ರಮದಿಂದ ದೇಶದ ಅಭಿ ವೃದ್ಧಿ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಸಾಗಲಿ' ಎಂದು ಅವರು ಆಶಿಸಿದರು.
`ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು, ಕೈಗಾರಿಕೆಗಳು ಹಾಗೂ ಕೃಷಿಕರಿಗೆ ನೂತನ ಸಾಲ ಯೋಜನೆಗಳನ್ನು ಬ್ಯಾಂಕುಗಳು ನೀಡುವಂತಾಗಬೇಕು. ಜನಸಂಖ್ಯೆಯಲ್ಲಿ ಶೇ 60 ರಷ್ಟು ಮಂದಿ ಇಂದಿಗೂ ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ. ಹಾಗಾಗಿ ಬ್ಯಾಂಕ್ ಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.