ADVERTISEMENT

ಭಗವದ್ಗೀತೆ ಭೋದನೆಯಿಂದ ತಾರತಮ್ಯ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬೆಂಗಳೂರು: ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸಬೇಕೆಂಬ ಸರ್ಕಾರದ ನೀತಿಯನ್ನು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ನಗರದ ಟೌನ್‌ಹಾಲ್ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎನ್.ಮೂರ್ತಿ ಮಾತನಾಡಿ, `ಶಾಲೆಗಳಲ್ಲಿ ಹಲವು ಧರ್ಮದ ಮಕ್ಕಳು ಕಲಿಯುತ್ತಿದ್ದಾರೆ. ಈ ರೀತಿ ಧಾರ್ಮಿಕ ಶಿಕ್ಷಣವನ್ನು ಭೋದನೆ ಮಾಡುವುದರಿಂದ ಮಕ್ಕಳಲ್ಲಿ ಈಗಿನಿಂದಲೇ ತಾರತಮ್ಯದ ಭಾವನೆ ಹುಟ್ಟು ಹಾಕಿದಂತಾಗುತ್ತದೆ. ವಿಜ್ಞಾನ, ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳ ಬಗ್ಗೆ ಶಿಕ್ಷಣ ನೀಡಿ ಮಕ್ಕಳ ಜ್ಞಾನವನ್ನು ವೃದ್ಧಿಸಬೇಕಾದ ಸರ್ಕಾರ, ಮುಂದಿನ ಪರಿಣಾಮಗಳ ಬಗ್ಗೆ ಯೋಚಿಸದೆ ಇಂತಹ ಸಂವಿಧಾನ ವಿರೋಧಿ ಕೃತ್ಯಕ್ಕೆ ಮುಂದಾಗಿದೆ~ ಎಂದು ಆರೋಪಿಸಿದರು.

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಭೋದನೆ ಮಾಡಲು ಈಗಾಗಲೇ ಧಾರ್ಮಿಕ ವಿಷಯಗಳಿಂದ ಕೂಡಿದ ಪುಸ್ತಕಗಳು ಮುದ್ರಣಗೊಂಡಿವೆ. ಈ ರೀತಿ ಶಿಕ್ಷಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಅನಕ್ಷರಸ್ಥ ಜನರಲ್ಲಿ ಮೂಡನಂಬಿಕೆಯ ಬೀಜ ಬಿತ್ತಿ, ಅವರನ್ನು ಎಂಜಲು ಎಲೆಯ ಮೇಲೆ ಉರುಳಿಸುವ ಮೂಲಕ ಬ್ರಾಹ್ಮಣರ ಪ್ರಭುತ್ವ ಹೆಚ್ಚಿಸಲು ಸರ್ಕಾರ ಶ್ರಮಿಸುತ್ತಿರುವುದು ಖಂಡನೀಯ. ಹಲವು ದೇವಸ್ಥಾನ, ಮಠಗಳಲ್ಲಿ ಪಂಕ್ತಿಬೇಧ ಹಾಗೂ ಜಾತಿಬೇಧ  ಮಾಡುವ ಮೂಲಕ ಅಸ್ಪೃಶ್ಯತೆ ಹುಟ್ಟುಹಾಕುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿ ರಾಜ್ಯದ ಅಶಾಂತಿಗೆ ಕಾರಣವಾದ ಸಂಘಟನೆಗಳನ್ನು ರದ್ದು ಪಡಿಸಿ, ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.