ಬೆಂಗಳೂರು: ಭೂ ವಿದ್ಯಾದಾನ ಶಾಲಾ ಜಮೀನುಗಳಲ್ಲಿ ಗೇಣಿ ಪದ್ದತಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಆ ಭೂಮಿಯ ಒಡೆತನವನ್ನು ನೀಡಬೇಕು ಎಂದು ರಾಜ್ಯ ಭೂ ವಿದ್ಯಾದಾನ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ, 58 ವರ್ಷಗಳಿಂದ 3 ಸಾವಿರ ರೈತರು 10 ಸಾವಿರ ಎಕರೆ ಜಮೀನಿನಲ್ಲಿ ಗೇಣಿ ಪದ್ದತಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಎಂದರು.
ರೈತ ಮುಖಂಡ ಕಡಿದಾಳು ಶಾಮಣ್ಣ ಅವರು ಮಾತನಾಡಿ, 1955ರಲ್ಲಿ ಜಾರಿಗೆ ಬಂದಿದ್ದ ಭೂ ವಿದ್ಯಾದಾನ ಚಳವಳಿಯಲ್ಲಿ ದಾನವಾಗಿ ಬಂದಿದ್ದ 20 ಸಾವಿರ ಎಕರೆ ಶಾಲಾ ಜಮೀನಿನ ಪೈಕಿ 10 ಸಾವಿರ ಎಕರೆ ಜಮೀನನ್ನು ಶಾಲಾ ಕಟ್ಟಡಗಳು ಹಾಗೂ ಆಟದ ಮೈದಾನಕ್ಕೆ ಬಳಸಿಕೊಳ್ಳಲಾಗಿತ್ತು. ಉಳಿದ ಜಮೀನನ್ನು ಸಾಗುವಳಿ ಮಾಡಲು ರೈತರಿಗೆ ಗೇಣಿಗೆ ನೀಡಲಾಗಿತ್ತು ಎಂದರು.
2005-06 ರಿಂದ ಈ ಜಮೀನಿನಲ್ಲಿ ಸಾಗುವಳಿ ಮಾಡಲು ಹರಾಜು ಮೂಲಕ ಅವಕಾಶ ನೀಡಲಾಗುತ್ತಿದೆ. ಇದರಿಂದ ಹಿಂದಿನಿಂದ ಸಾಗುವಳಿ ಮಾಡುತ್ತಾ ಬಂದಿದ್ದ ರೈತರಿಗೆ ಅನ್ಯಾಯವಾಗುತ್ತಿದೆ. ಜಮೀನಿನ ಪಹಣಿ ರೈತರ ಹೆಸರಿನಲ್ಲಿದ್ದು, ಖಾತೆ ಮಾತ್ರ ಆಯಾ ಪ್ರದೇಶದ ಪ್ರಭಾವಿಗಳ ಹೆಸರಿನಲ್ಲಿದೆ. ಇದನ್ನು ಬದಲಾಯಿಸಿ ರೈತರಿಗೆ ಭೂಮಿಯ ಒಡೆತನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.