ADVERTISEMENT

ಮಕ್ಕಳ ಕುಂಚದಲ್ಲಿ ಯೋಧರ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST
ನಗರದ ಬಾಲಭವನದಲ್ಲಿ `ದಿ ಫ್ಲ್ಯಾಗ್ಸ್ ಆಫ್ ಹಾನರ್ ಫೌಂಡೇಷನ್', `ಕಾರ್ಗಿಲ್ ವಿಜಯ ದಿವಸ' ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಚಿತ್ರರಚನೆ ಸ್ಪರ್ಧೆಯಲ್ಲಿ ವಿವಿಧ ಶಾಲಾ ಮಕ್ಕಳು ಚಿತ್ರಗಳನ್ನು ಬಿಡಿಸಿದರು
ನಗರದ ಬಾಲಭವನದಲ್ಲಿ `ದಿ ಫ್ಲ್ಯಾಗ್ಸ್ ಆಫ್ ಹಾನರ್ ಫೌಂಡೇಷನ್', `ಕಾರ್ಗಿಲ್ ವಿಜಯ ದಿವಸ' ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಚಿತ್ರರಚನೆ ಸ್ಪರ್ಧೆಯಲ್ಲಿ ವಿವಿಧ ಶಾಲಾ ಮಕ್ಕಳು ಚಿತ್ರಗಳನ್ನು ಬಿಡಿಸಿದರು   

ಬೆಂಗಳೂರು: ಜುಲೈ 26ಕ್ಕೆ ಕಾರ್ಗಿಲ್ ಯುದ್ಧ ನಡೆದು ಹದಿನಾಲ್ಕು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಯುದ್ಧದಲ್ಲಿ ಮಡಿದ ಯೋಧರ ಸ್ಮರಣಾರ್ಥ `ದಿ ಫ್ಲ್ಯಾಗ್ಸ್ ಆಫ್ ಹಾನರ್ ಫೌಂಡೇಷನ್' ಶುಕ್ರವಾರ ನಗರದ ಬಾಲಭವನದಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿತ್ತು.

ನಗರದ ವಿವಿಧ ಶಾಲೆಗಳಿಂದ ಬಂದಿದ್ದ 40ಕ್ಕೂ ಹೆಚ್ಚು ಮಕ್ಕಳು ದೇಶದ ಗಡಿಗಳಲ್ಲಿ ರಕ್ಷಣೆಗಾಗಿ ನಿಂತಿರುವ ಯೋಧರು, ಭೂಸೇನೆ, ವಾಯುಸೇನೆ, ನೌಕಾಸೇನೆಯಲ್ಲಿ ಯುದ್ಧಕ್ಕೆ ಬಳಸುವ ಉಪಕರಣಗಳು, ತಮ್ಮ ಪ್ರಾಣವನ್ನೂ ಮುಡುಪಾಗಿಟ್ಟು ದೇಶದ ಧ್ವಜವನ್ನು ಎತ್ತಿಹಿಡಿಯುತ್ತಿರುವ ಯೋಧರು...ಬಗೆ ಬಗೆ ಚಿತ್ತಾರಗಳನ್ನು ಬಣ್ಣಗಳಲ್ಲಿ ಮೂಡಿಸಿದರು.

ಆರ್ಮಿ ಪಬ್ಲಿಕ್ ಶಾಲೆಯ ಶಿಕ್ಷಕಿ ಜಿ.ಸಹನಾ, `ಕಾರ್ಗಿಲ್ ಯುದ್ಧ ನಡೆದು ಜುಲೈ 26ಕ್ಕೆ ಹದಿನಾಲ್ಕು ವರ್ಷ. ಇವತ್ತಿನ ಪೀಳಿಗೆಯ ಮಕ್ಕಳಲ್ಲಿ ಯಾತಕ್ಕಾಗಿ ಯುದ್ಧ ನಡೆದಿತ್ತು ಎಂಬ ಬಗ್ಗೆ ತಿಳಿವಳಿಕೆ ಇಲ್ಲ. ಇಂತಹ ಸ್ಪರ್ಧೆಗಳಿಂದ ಮಕ್ಕಳಲ್ಲಿ ಜಾಗೃತಿ ಮೂಡಿಸಲು, ಯೋಧರ ತ್ಯಾಗ ಬಲಿದಾನಗಳ ಬಗ್ಗೆ ಗೌರವ ಬೆಳೆಸಲು ಸಾಧ್ಯವಾಗಲಿದೆ' ಎಂದು ಸಂತೋಷ ವ್ಯಕ್ತಪಡಿಸಿದರು.

`ಚಿತ್ರಕಲಾ ಸ್ಪರ್ಧೆ ಮಕ್ಕಳ ವ್ಯಕ್ತಿತ್ವ ಹಾಗೂ ಬೌದ್ಧಿಕ ವಿಕಸನಕ್ಕೆ ದಾರಿಯಾಗಲಿದೆ. ಬುದ್ಧಿಮಾಂದ್ಯ ಮಕ್ಕಳಿಗೂ ವೈದ್ಯರು ಬಣ್ಣಗಳಲ್ಲಿ ಆಡಲು ಬಿಡಿ ಎಂದು ಸಲಹೆ ನೀಡುತ್ತಾರೆ. ದಿನನಿತ್ಯ ಪಾಠಪ್ರವಚನಗಳ ಜಂಜಾಟದಲ್ಲಿ ಮುಳುಗಿರುವ ಮಕ್ಕಳಿಗೆ ಆಗಾಗ ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಮಕ್ಕಳ ಮನಸ್ಸಿಗೆ ಕೊಂಚ ಉಲ್ಲಾಸ ದೊರೆಯುತ್ತದೆ. ಮಾತಿನಲ್ಲಿ ಹೇಳಲಾಗದ ಭಾವನೆಗಳನ್ನು ಚಿತ್ತಾರಗಳ ಮೂಲಕ ಮೂಡಿಸಲು ಸಾಧ್ಯವಾಗಲಿದೆ' ಎಂದು ಟ್ವಿಂಟ್ಲರ್ ಶಾಲೆಯ ಶಿಕ್ಷಕಿ ಆರ್.ನಾಗರತ್ನ ಹಾಗೂ ಪೋಷಕಿ ವಿ.ಸುಮನಾ ಅನಿಸಿಕೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT