ADVERTISEMENT

ಮತದಾರರ ಕಣ್ಣಲ್ಲಿ ಮಾದರಿ ನಾಯಕ

​ಪ್ರಜಾವಾಣಿ ವಾರ್ತೆ
Published 3 ಮೇ 2018, 20:15 IST
Last Updated 3 ಮೇ 2018, 20:15 IST

ವಾಸವಿರುವ ಕ್ಷೇತ್ರದಲ್ಲಿಯೇ ಸ್ಪರ್ಧಿಸಬೇಕು

ವಾಸವಿರುವ ಕ್ಷೇತ್ರದಲ್ಲೇ ಸ್ಪರ್ಧಿಸಿದರೆ ಕ್ಷೇತ್ರದ ಭೌಗೋಳಿಕ ಲಕ್ಷಣಗಳು ಮತ್ತು ಅಭಿವೃದ್ಧಿ ಸ್ಥಿತಿಗತಿಗಳ ಬಗ್ಗೆ ಪೂರ್ಣ ಮಾಹಿತಿ ಸಿಗುತ್ತದೆ. ನಾಯಕನಾದವನು ವಿದ್ಯಾವಂತನಾಗಿರುವುದು ಮುಖ್ಯ. ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು. ಅಧಿಕಾರ ಬಂದ ಮೇಲೂ ಜನಸ್ನೇಹಿಯಾಗಿರಬೇಕು. ಜನರ ಬಳಿ ಹೋಗಿ ಕುಂದುಕೊರತೆಗಳನ್ನು ವಿಚಾರಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತವನಾಗಿರಬೇಕು. ಯುವಜನರನ್ನು ರಾಜಕೀಯ ಕ್ಷೇತ್ರದತ್ತ ಸೆಳೆಯಬೇಕು.

–ರವಿಕುಮಾರ್, ವಿದ್ಯಾರ್ಥಿ

ADVERTISEMENT

ರೈತರ ಆತ್ಮಹತ್ಯೆ ತಡೆಯಬೇಕು

ನಮ್ಮ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಾಕಷ್ಟು ಕಾರಣಗಳು ಇವೆ. ಅವರಿಗೆ ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ಸಿಗುತ್ತಿಲ್ಲ. ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ನಾಗರಿಕನಿಗೂ ತಲುಪುವಂತೆ ಮಾಡುವವನೇ ನಿಜವಾದ ನಾಯಕ. ಹಸಿವುಮುಕ್ತ ರಾಷ್ಟ್ರವನ್ನು ನಿರ್ಮಾಣ ಮಾಡಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು.

–ಬಸವರಾಜ ಖೈರವಾಡಗಿ, ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿ

ಪ್ರಗತಿಪರ ಚಿಂತಕನಾಗಿರಬೇಕು

ನಾಮಕಾವಸ್ಥೆಗೆ ನಾಯಕನಾಗದೆ ಪ್ರಜೆಗಳ ಅಭಿವೃದ್ಧಿಗೆ ದುಡಿಯಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗ
ಳೆಂಬುದನ್ನು ಮರೆಯಬಾರದು. ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲ ಸೌಕರ್ಯಗಳನ್ನು ಅನು
ಷ್ಠಾನಗೊಳಿಸುವಲ್ಲಿ ಸದಾ ಪ್ರಗತಿಪರ ಚಿಂತಕನಾಗಿ ಕಾರ್ಯನಿರ್ವಹಿಸಬೇಕು.

–ಕ.ಗಂ.ಶಶಿಕುಮಾರ್‌, ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ

ನಾಯಕನ ವಯಸ್ಸಿಗೆ ಮಿತಿ ಇರಲಿ

ನಮ್ಮ ನಾಯಕನ ವಯಸ್ಸಿಗೆ ಮಿತಿ ಇರಬೇಕು. ಯುವಪೀಳಿಗೆಗೆ ಅವಕಾಶ ಸಿಗಬೇಕು. ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಕೈಗಾರಿಕೆಗಳ ಬದಲು ಕೃಷಿಗೆ ಪ್ರಾಮುಖ್ಯತೆ ನೀಡಬೇಕು. ಎಲ್ಲಾ ವರ್ಗದ ಜನರಿಗೂ ಏಕ ಶಿಕ್ಷಣ ವ್ಯವಸ್ಥೆ ಇರಬೇಕು. ಪ್ರತಿ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ತೆರೆಯ
ಬೇಕು. ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಒತ್ತು ನೀಡಬೇಕು. ಕ್ಷೇತ್ರದ ಜನರ ಸಂಪರ್ಕದಲ್ಲಿ ಇರಬೇಕು. ಪ್ರಾಮಾಣಿಕವಾಗಿ ಅವರ ಸಮಸ್ಯೆಗಳನ್ನು ಅರಿತು ಬಗೆಹರಿಸಬೇಕು.

–ಆಕಾಶ್, ವಿದ್ಯಾರ್ಥಿ

ಭ್ರಷ್ಟಾಚಾರ ಮುಕ್ತನಾಗಿರಬೇಕು

ಮಾದರಿ ನಾಯಕ ಆಗಬೇಕಾದರೆ ಮೊದಲು ಭ್ರಷ್ಟಾಚಾರ ಮುಕ್ತನಾಗಿರಬೇಕು. ಸ್ವ ಹಿತಾಸಕ್ತಿಯನ್ನು ಬಿಡಬೇಕು. ಜನರ ಸೇವೆಯೇ ಜನಾರ್ದನ ಸೇವೆ ಎಂಬ ಮನೋಭಾವದಿಂದ ಕೆಲಸ ಮಾಡಬೇಕು. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಆರೋಗ್ಯ, ಕೈಗಾರಿಕೆ, ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಮುಂತಾದ ಮೂಲ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು.

–ಆರ್‌. ಕುಮಾರಸ್ವಾಮಿ, ಮೂಲೆಗುಂದಿ

ಹೊಸ ಶಿಕ್ಷಣ ನೀತಿ ತರಬೇಕು

ಜಾತಿ-ಧರ್ಮ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕುವಂಥ ಬುನಾದಿಯನ್ನು ಸೃಷ್ಟಿಸಬಲ್ಲ ಧೀಮಂತ ನಾಯಕ ಬೇಕು. ಮನುಷ್ಯರೆಲ್ಲಾ ಒಂದೆ ಎಂದು ಅರಿವು ಮೂಡಿಸುವ ಜ್ಞಾನಿಯಾಗಿರಬೇಕು. ಹೊಸ ಶಿಕ್ಷಣ ನೀತಿ ಜಾರಿಗೆ ತರಬಲ್ಲವನಾಗಿರಬೇಕು. ಹೊಸದಾಗಿ ಶಾಲೆಗೆ ಸೇರುವ ಪ್ರತಿಯೊಂದು ಮಗುವಿಗೂ ಹೆಸರಿನ ಹಿಂದೆ ಮುಂದೆ ಯಾವುದೇ ಜಾತಿ-ಧರ್ಮ, ಮನೆತನ ಸೂಚಿಸುವ ಹೆಸರುಗಳನ್ನು, ಕಲಂಗಳನ್ನು ನಿರ್ಬಂಧಿಸಬೇಕು. ಶಿಕ್ಷಣ ಏಕೀಕರಣವಾಗಬೇಕು

–ಸಂಪತ್ ಕುಮಾರ್ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.