ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಲಿದ್ದು, ಚುನಾವಣೆಯಿಂದ ದೂರ ಉಳಿಯದೇ, ಮತದಾನ ಮಾಡಲು ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.
ಯುನೈಟೆಡ್ ಬೆಂಗಳೂರು ಸಂಸ್ಥೆ ನಗರದ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರ ನೋಂದಣಿ ಅಭಿಯಾನದಲ್ಲಿ ಮಾತನಾಡಿದ ಅವರು, ‘ಇಂದು ಯುವಕರು ರಾಜಕೀಯದ ಬಗ್ಗೆ ಸಿನಿಕರಾಗಿದ್ದಾರೆ. ನೋಂದಾಯಿಸಿಕೊಂಡ ಅರ್ಧದಷ್ಟು ಯುವಕರು ಮತ ಹಾಕುವುದಿಲ್ಲ. ಉಳಿದರ್ಧ ಯುವಕರು ಮತದಾನಕ್ಕೆ ನೋಂದಾಯಿಸಿಕೊಳ್ಳದೆ ಚುನಾವಣಾ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದರು.
‘18 ವರ್ಷ ತುಂಬಿದ 55 ಸಾವಿರ ಯುವಜನ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಇದ್ದಾರೆ. 55 ಸಾವಿರ ಮತಗಳು ಖಂಡಿತ ನಿರ್ಣಾಯಕ. ಯಾರು ಗೆಲ್ಲಬೇಕು ಎಂಬುದನ್ನು ನೀವೇ ನಿರ್ಧರಿಸಲಿದ್ದೀರಿ. ನೀವು ನೋಂದಾಯಿಸಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿದ್ದೇವೆ ಎಂಬ ಸಂದೇಶ ನೀಡಿ. ಎಲ್ಲ ಪಕ್ಷದವರೂ ನಿಮ್ಮ ಮುಂದೆ ಬಂದು ನಿಲ್ಲುತ್ತಾರೆ’ ಎಂದು ಅವರು ಹೇಳಿದರು.
ಮೌಂಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿ ಮೌರೀನಾ ಆಲ್ಮೇಡ್ ಮಾತನಾಡಿ, ‘ಪಕ್ಷಗಳು ಯುವಜನರ ಅಗತ್ಯಗಳಿಗೆ ಗಮನ ಕೊಡುವುದೇ ಇಲ್ಲ’ ಎಂದರು.
ಸಾಮಾಜಿಕ ಕಾರ್ಯಕರ್ತ ಪಿ.ವಿ.ಭಟ್ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.