ADVERTISEMENT

ಮರಳು ವ್ಯಾಪಾರಿ, ಟೈಲರ್ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:56 IST
Last Updated 16 ಡಿಸೆಂಬರ್ 2012, 19:56 IST

ಬೆಂಗಳೂರು: ಪೀಣ್ಯ ಬಳಿಯ ಸಪ್ತಗಿರಿ ಲೇಔಟ್‌ನಲ್ಲಿ ಭಾನುವಾರ ಬೆಳಿಗ್ಗೆ ಮರಳು ವ್ಯಾಪಾರಿ ನೇಣು ಹಾಕಿಕೊಂಡಿದ್ದು, ಹಲಸೂರು ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಟೈಲರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಪ್ತಗಿರಿ ಲೇಔಟ್ ಐದನೇ ಅಡ್ಡರಸ್ತೆ ನಿವಾಸಿ ಆನಂದ್‌ಕುಮಾರ್ (57) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಲಕ್ಷ್ಮಿ ಎಂಬುವರನ್ನು ವಿವಾಹವಾಗಿದ್ದ ಅವರು ಮರಳು ವ್ಯಾಪಾರ ಮಾಡುತ್ತಿದ್ದರು. ಕುಟುಂಬ ಸದಸ್ಯರೆಲ್ಲಾ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಅವರು ಮನೆಯ ಕಟ್ಟಡದ ಒಂದನೇ ಅಂತಸ್ತಿನ ಕೊಠಡಿಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ ಎಂದು ಪೀಣ್ಯ ಪೊಲೀಸರು ಹೇಳಿದ್ದಾರೆ.

ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಪತಿ, ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದರಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ: ಹಲಸೂರಿನ ಒಂದನೇ ಅಡ್ಡರಸ್ತೆ ನಿವಾಸಿ ಧರಣಿಕುಮಾರ್ (36) ಎಂಬುವರು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡು ಮೂಲದ ಅವರು ಪತ್ನಿ ಭುವನೇಶ್ವರಿ ಮತ್ತು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಟೈಲರ್ ಆಗಿದ್ದ ಅವರು ಪ್ರತಿನಿತ್ಯ ಪಾನಮತ್ತರಾಗಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಅಂತೆಯೇ ರಾತ್ರಿಯೂ ಜಗಳವಾಗಿದೆ. ಬಳಿಕ ಭುವನೇಶ್ವರಿ ಅವರು ಮಕ್ಕಳೊಂದಿಗೆ ಕೊಠಡಿಯಲ್ಲಿ ಮಲಗಿದ್ದಾರೆ. ಆ ನಂತರ ಧರಣಿಕುಮಾರ್, ಅಡುಗೆ ಕೋಣೆಗೆ ತೆರಳಿ ಅಲ್ಲಿಯೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.