ಬೆಂಗಳೂರು: ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಮಾಗಡಿ ಉಪ ವಿಭಾಗದಲ್ಲಿ 2011–12ರಲ್ಲಿ ₨57.62 ಕೋಟಿ ಮೊತ್ತದ ಅವ್ಯವಹಾರ ನಡೆದಿದ್ದು, 17 ಅಧಿಕಾರಿಗಳು, 16 ಗುತ್ತಿಗೆದಾರರು ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
‘ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದು, 1.76 ಲಕ್ಷ ಪುಟಗಳ ವರದಿಯನ್ನು ರಾಮನಗರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನಾಲ್ವರು ಅಧಿಕಾರಿಗಳು ಮತ್ತು 16 ಗುತ್ತಿಗೆದಾರರ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ. 13 ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯ-ನಾರಾಯಣ ರಾವ್ ತಿಳಿಸಿದ್ದಾರೆ.
ಮಾಗಡಿ ಉಪ ವಿಭಾಗದಲ್ಲಿ ₨ 600 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2013ರ ಏಪ್ರಿಲ್ 18ರಂದು 13 ಅಧಿಕಾರಿಗಳು ಮತ್ತು ಮೂವರು ಗುತ್ತಿಗೆದಾರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಈಗ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು 33 ಮಂದಿ ಅವ್ಯವಹಾರದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.
2011–12ನೇ ಆರ್ಥಿಕ ವರ್ಷದಲ್ಲಿ ಲೋಕೋಪಯೋಗಿ ಇಲಾಖೆಯ ಮಾಗಡಿ ಉಪ ವಿಭಾಗಕ್ಕೆ ₨ 236.12 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ ₨ 137 ಕೋಟಿ ಗುತ್ತಿಗೆದಾರರಿಗೆ ಪಾವತಿ ಆಗಿತ್ತು. ಅದರಲ್ಲಿ ₨ 56.72 ಕೋಟಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಗಳು: ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕೆ.ಬಿ.ದೇವರಾಜು, ಮಾಗಡಿ ಉಪ ವಿಭಾಗದ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಗಂಗಾಧರಯ್ಯ, ನಿವೃತ್ತ ಲೆಕ್ಕ ಪರಿಶೋಧನಾಧಿಕಾರಿ ಶ್ರೀನಿವಾಸ್, ಸಹಾಯಕ ಎಂಜಿನಿಯರ್ ಜಿ.ಕೆ.ಚಂದ್ರಶೇಖರ್ (ಈಗ ಮೃತರು), ಗುತ್ತಿಗೆದಾರರಾದ ಶಂಕರ್, ಕೆಂಪರಾಜು, ನಂಜಯ್ಯ, ಆರ್.ರವಿ, ಧನಂಜಯ, ವೆಂಕೇಶ್, ಎಚ್.ನಾರಾಯಣಪ್ಪ, ವೆಂಕಟರಾಮು, ಜೆ.ಜಗದೀಶ್, ಕೆ.ಪ್ರಕಾಶ್, ಎಸ್.ಬೈರೇಗೌಡ, ಟಿ.ರಮೇಶ್, ಜಿ.ಎಲ್.ಆಂಜನೇಯ, ಜಿ.ಕುಮಾರ್, ಎಲ್.ಉಮಾಶಂಕರ್ ಮತ್ತು ರುದ್ರಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.
ಪ್ರಕರಣ ನಡೆದ ಅವಧಿಯಲ್ಲಿ ಇಲಾಖೆಯ ದಕ್ಷಿಣ ವಿಭಾಗದ ಮುಖ್ಯ ಎಂಜಿನಿಯರ್ ಸದಾಶಿವರೆಡ್ಡಿ ಬಿ.ಪಾಟೀಲ, ಆಂತರಿಕ ಆರ್ಥಿಕ ಸಲಹೆಗಾರರಾಗಿದ್ದ ಗೋವಿಂದರಾಜು, ಸುಪರಿಂಟೆಂಡಿಂಗ್ ಎಂಜಿನಿಯರ್ ಉದಯಶಂಕರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಎ.ನಟರಾಜು, ಸಹಾಯಕ ಎಂಜಿನಿಯರ್ಗಳಾದ ಎಚ್.ಎಸ್.ವೆಂಕಟೇಶ್, ಕಾಂತರಾಜು, ಕೆ.ಆರ್.ಆನಂದಕುಮಾರ್, ಕೆ.ಸಿ.ಪ್ರಭಾಕರ್, ಟಿ.ವಿ.ಮುಕುಂದ, ನಗದು ಗುಮಾಸ್ತ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆಯ ಗುಣ ನಿಯಂತ್ರಣ ವಿಭಾಗದ ಎಇಇಗಳಾದ ಸಿದ್ದಲಿಂಗಕುಮಾರ್, ಎಸ್.ವಿ.ಶ್ರೀನಿವಾಸ್ ಮತ್ತು ಎಇ ವಿ.ಕೃಷ್ಣ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.