ADVERTISEMENT

ಮಾನವ ಧರ್ಮ ಎಲ್ಲಕ್ಕಿಂತ ಶ್ರೇಷ್ಠ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಬೆಂಗಳೂರು: `ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಮಿಗಿಲಾದದ್ದು. ಹೀಗಾಗಿ, ಇನ್ನೊಂದು ಧರ್ಮವನ್ನು ಕೀಳಾಗಿ ಕಾಣುವುದು ತಪ್ಪು~ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಅವರು ಹೇಳಿದರು.

ಮಜ್ಲಿಸ್ ಖುದ್ದಾಮುಲ್ ಆಹ್ಮದಿಯಾ ಸಂಸ್ಥೆಯು ಕನ್ನಡದಲ್ಲಿ ಹೊರತಂದಿರುವ `ಮುಹಮ್ಮದ್ ಪೈಗಂಬರರ ಜೀವನ ಚರಿತ್ರೆ~ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, `ಮಾನವ ಇಂದು ತಪ್ಪು ದಾರಿಯ ಕಡೆ ಹೆಜ್ಜೆ ಹಾಕುತ್ತಿದ್ದಾನೆ. ಇಂತಹ ಸನ್ನಿವೇಶದಲ್ಲಿ ಎಲ್ಲ ಧರ್ಮಗಳು ಮಾನವನಿಗೆ ಉತ್ತಮ ದಾರಿ ತೋರಿಸಬೇಕಾಗಿದೆ~ ಎಂದರು.

ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಡಾ.ಮಹೇಶ ಜೋಷಿ, `ನಾನು ಚಿಕ್ಕವನಾಗಿದ್ದ ದಿನಗಳಲ್ಲಿಯೇ ಮುಸ್ಲಿಂ ಧರ್ಮ ನನ್ನ ಮೇಲೆ ಪ್ರಭಾವ ಬೀರಿತು. ಕೆಲವು ಕಿಡಿಗೇಡಿಗಳಿಂದ ಮುಸ್ಲಿಂ ಧರ್ಮ ಕೆಟ್ಟದ್ದು ಎಂದು ಹೇಳುವುದು ತಪ್ಪು. ಹಜರತ್ ಮುಹಮ್ಮದರ ತ್ಯಾಗ ಮತ್ತು ಮುಸ್ಲಿಂ ಧರ್ಮ ಹೇಗಿದೆ ಎನ್ನುವುದಕ್ಕೆ ಕನ್ನಡ ಓದುಗರಿಗೆ ಉತ್ತಮವಾದ ಪುಸ್ತಕವಾಗಿದೆ. ನಿಜವಾದ ಮುಸ್ಲಿಂ ಯಾರು ಎಂಬುದು ಈ ಪುಸ್ತಕದಲ್ಲಿ ಕಾಣಬಹುದು~ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮತ್ತು ಸಾಹಿತಿ ಬಿ.ಎ.ಹಸನಬ್ಬ ಮಾತನಾಡಿ, `ನಾನು ಹಿಂದು, ನಾನು ಮುಸ್ಲಿಂ, ಕ್ರೈಸ್ತ ಎನ್ನುವವರಿಗಿಂತ ನಾನು ಭಾರತೀಯ ಎಂದು ಹೇಳುವವರ ಸಂಖ್ಯೆ ಕಡಿಮೆಯಾಗಿದೆ.

ಮಾನವರ ಮನಸ್ಸು ನಿಜವಾದ ದ್ವೇಷವನ್ನು ಹುಟ್ಟಿಸುತ್ತಿದ್ದು, ಇದರಿಂದ ಹೊರಬಂದಾಗ ಮಾತ್ರ ಹಿಂಸೆ ಕಡಿಮೆಯಾಗುತ್ತದೆ. ನಾನು ಯಾವ ಧರ್ಮದವನು ಎಂದು ಹೇಳುವುದಕ್ಕಿಂತ ನಾನೊಬ್ಬ ಭಾರತೀಯ ಎನ್ನುವುದು ಹೆಮ್ಮೆಯಾಗಿದೆ~ ಎಂದು ಅವರು ಹೇಳಿದರು.

 ಕಾರ್ಯಕ್ರಮದಲ್ಲಿ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ ಎಂ.ಉಬೈದುಲ್ಲಾ, ಪುಸ್ತಕದ ಪರಿಶೀಲಕ ಮುಹಮ್ಮದ್ ಯೂಸುಫ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

`ಪ್ರಜಾವಾಣಿ~ ಸಹಾಯಕ ಸಂಪಾದಕ ಎಂ.ಎ.ಪೊನ್ನಪ್ಪ, ಅಹ್ಮದೀಯ    ಮುಸ್ಲಿಂ ಮಿಷನ್‌ನ ಅಧ್ಯಕ್ಷ ಮಹಮ್ಮದ್ ಶಫೀವುಲ್ಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.