ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಒಯು) 2018–19ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಕುರಿತು ತೀರ್ಮಾನ ಆಗುವವರೆಗೂ ವರದಿ ನೀಡದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನೇತೃತ್ವದ ತಜ್ಞರ ಸಮಿತಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಮಾನ್ಯತೆ ನವೀಕರಣಕ್ಕಾಗಿ ಈ ಬಾರಿಯೂ ಅರ್ಜಿ ಸಲ್ಲಿಸಲಾಗಿದ್ದು, ಯುಜಿಸಿ ಜತೆ ನಿರಂತರ ಸಂಪರ್ಕ ಸಾಧಿಸಲಾಗಿದೆ. ಈ ಅವಧಿಯೊಳಗೆ ತಜ್ಞರ ಸಮಿತಿ ವ್ಯತಿರಿಕ್ತ ವರದಿ ನೀಡಿದರೆ ಅದು ಮಾನ್ಯತೆ ಪಡೆಯುವುದರ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ ಎಂಬ ಆತಂಕ ವಿಶ್ವವಿದ್ಯಾಲಯದಲ್ಲಿ ಕೇಳಿಬರುತ್ತಿದೆ.
ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ₹ 550 ಕೋಟಿಯನ್ನು ಬೇರಡೆಗೆ ವರ್ಗಾಯಿಸುವುದು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಬೇರೆ ವಿಶ್ವವಿದ್ಯಾಲಯಗಳಿಗೆ ನಿಯೋಜಿಸುವ ಸಂಬಂಧ ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಇದೇ ತಿಂಗಳ 12ರಂದು ತಜ್ಞರ ಸಮಿತಿ ರಚಿಸಲಾಗಿದೆ. ಒಂದು ತಿಂಗಳೊಳಗೆ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ.
ವಿಶ್ವವಿದ್ಯಾಲಯಕ್ಕೆ ಮರಳಿ ಮಾನ್ಯತೆ ನೀಡುವ ಸಂಬಂಧ ಯುಜಿಸಿಯಲ್ಲಿ ಈಗಲೂ ಚರ್ಚೆ ನಡೆಸಲಾಗುತ್ತಿದೆ. ಒಂದು ವೇಳೆ ತಜ್ಞರ ಸಮಿತಿಯು ಇಲ್ಲಿನ ಹಣವನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ವರದಿ ನೀಡಿದ್ದೇ ಆದಲ್ಲಿ ಆಗ ಯುಜಿಸಿ ಮಾನ್ಯತೆ ನವೀಕರಿಸಲು ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ. ಸಮಿತಿ ನೀಡುವ ವರದಿಯಿಂದ ವಿಶ್ವವಿದ್ಯಾಲಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಮನವಿ ಮಾಡಲಾಗುತ್ತಿದೆ ಎಂದರು.
ಹಣ ವರ್ಗಾವಣೆ ಸಾಧ್ಯವಿಲ್ಲ:
‘ಕೆಎಸ್ಒಯು ಸ್ವಾಯತ್ತ ಸಂಸ್ಥೆ. ಇಲ್ಲಿನ ಹಣವನ್ನು ಬೇರೆಡೆಗೆ ವರ್ಗಾಯಿಸಲು ಕಾನೂನಾತ್ಮಕವಾಗಿಯೂ ಸಾಧ್ಯವಿಲ್ಲ. ಯಾವುದೇ ತೀರ್ಮಾನವನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಕುಲಾಧಿಪತಿ (ರಾಜ್ಯಪಾಲರು) ಮಾತ್ರ ತೆಗೆದುಕೊಳ್ಳಲು ಸಾಧ್ಯ ಎಂದೂ ಚಂದ್ರಶೇಖರ್ ಸ್ಪಷ್ಪಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.