ಬೆಂಗಳೂರು: ಇಟಲಿಯ ಹಡಗಿನ ಸಿಬ್ಬಂದಿ ಕೇರಳದ ಇಬ್ಬರು ಮೀನುಗಾರರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಇಟಲಿ ವಿದೇಶಾಂಗ ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತಿಳಿಸಿದರು.
ಭಾನುವಾರ ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿದ ಅವರು, `ಈ ಪ್ರಕರಣದಿಂದಾಗಿ ಭಾರತ ಮತ್ತು ಇಟಲಿ ನಡುವಣ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆಯಾಗಿಲ್ಲ. ದ್ವಿಪಕ್ಷೀಯ ಸಂಬಂಧ ಹಾಗೆಯೇ ಮುಂದುವರಿಯುತ್ತದೆ. ಆದರೆ, ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಇಟಲಿ ವಿದೇಶಾಂತ ಸಚಿವರೊಂದಿಗೆ ಮಾತನಾಡುತ್ತೇನೆ~ ಎಂದರು.
ದೋಣಿಯಲ್ಲಿದ್ದ ಕೇರಳದ ಮೀನುಗಾರರು ಮೀನು ಮತ್ತು ಮೀನಿನ ಬಲೆಗಳನ್ನು ಮಾತ್ರ ಸಾಗಿಸುತ್ತಿದ್ದರು. ಆದರೆ ಇಟಲಿಯ ಹಡಗಿನ ಸಿಬ್ಬಂದಿ ದೋಣಿಯ ಮೇಲೆ ಗುಂಡು ಹಾರಿಸಿ ಮೀನುಗಾರರನ್ನು ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಜೊತೆಗೂ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.