ADVERTISEMENT

ಮುಕ್ಕಾಲು ತಾಸಿನಲ್ಲೇ ಕ್ಯಾಬ್ ಚಾಲಕ ಪೊಲೀಸರ ಬಲೆಗೆ

‘ಹಿಟ್ ಅಂಡ್ ರನ್’ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 20:12 IST
Last Updated 8 ಜೂನ್ 2017, 20:12 IST
ಚಿಕಿತ್ಸೆ ಪಡೆಯುತ್ತಿರುವ ಸೇಂಥಿಲ್
ಚಿಕಿತ್ಸೆ ಪಡೆಯುತ್ತಿರುವ ಸೇಂಥಿಲ್   

ಬೆಂಗಳೂರು:  ಜೆ.ಸಿ.ರಸ್ತೆಯ ಭಾರತ್ ಜಂಕ್ಷನ್ ಬಳಿ ಕೂಲಿ ಕಾರ್ಮಿಕನೊಬ್ಬನಿಗೆ ಡಿಕ್ಕಿ ಮಾಡಿ ಕಾರು ನಿಲ್ಲಿಸದೆ ಪರಾರಿಯಾಗಿದ್ದ ಚಂದ್ರಶೇಖರ್ (30) ಎಂಬುವರನ್ನು ಅಪಘಾತ ಸಂಭವಿಸಿದ ಮುಕ್ಕಾಲು ತಾಸಿನಲ್ಲೇ ಪೊಲೀಸರು ಬಂಧಿಸಿದ್ದಾರೆ.

ವಿನೋಬಾನಗರ ನಿವಾಸಿ ಸೇಂಥಿಲ್ (25) ಎಂಬುವರು, ಬುಧವಾರ ರಾತ್ರಿ 10.30ರ ಸುಮಾರಿಗೆ ಭಾರತ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಕ್ಯಾಬ್ ಚಲಾಯಿಸಿಕೊಂಡು ಬಂದ ಚಂದ್ರಶೇಖರ್, ಅವರಿಗೆ ಡಿಕ್ಕಿ ಮಾಡಿದ್ದರು. ಗುದ್ದಿದ ರಭಸಕ್ಕೆ ಐದಾರು ಅಡಿಯಷ್ಟು ಮೇಲೆ ಎಗರಿದ್ದ ಸೇಂಥಿಲ್, ನಂತರ ಕಾರಿನ ಬಂಪರ್‌ ಮೇಲೆ ಬಿದ್ದು ರಸ್ತೆಗೆ ಉರುಳಿದ್ದರು.

ಸ್ಥಳದಲ್ಲಿ ಜನ  ಜಮಾಯಿಸುತ್ತಿದ್ದಂತೆಯೇ ಅವರು ಕಾರು ನಿಲ್ಲಿಸದೆ ಹೊರಟು ಹೋಗಿದ್ದರು. ಈ ಹಂತದಲ್ಲಿ ನೋಂದಣಿ ಸಂಖ್ಯೆ (ಕೆಎ 04 ಎಎ 5572) ನೋಡಿಕೊಂಡಿದ್ದ ಸೇಂಥಿಲ್, ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಆ ಸಂಖ್ಯೆಯನ್ನು ನೀಡಿದ್ದರು.

ADVERTISEMENT

‘ಆ ನೋಂದಣಿ ಸಂಖ್ಯೆಯನ್ನು ನಿಯಂತ್ರಣ ಕೊಠಡಿಗೆ ರವಾನಿಸಿದೆವು. ಅಲ್ಲಿನ ಸಿಬ್ಬಂದಿ ಕಾರಿನ ಕುರಿತು ಎಲ್ಲ ಠಾಣೆಗಳಿಗೂ ಮಾಹಿತಿ ಕೊಟ್ಟರು. ರಾತ್ರಿ 12.15ರ ಸುಮಾರಿಗೆ ಕೆ.ಆರ್.ರಸ್ತೆಯಲ್ಲಿ ವಾಹನ ತಪಸಾಣೆ ನಡೆಸುತ್ತಿದ್ದ ನಮ್ಮ ಸಿಬ್ಬಂದಿ, ಆ ಕಾರನ್ನು ತಡೆದು ಚಾಲಕನನ್ನು ವಶಕ್ಕೆ ಪಡೆದುಕೊಂಡರು. ನಂತರ ನಮ್ಮ ವಶಕ್ಕೆ ಕೊಟ್ಟರು’ ಎಂದು ಚಾಮರಾಜಪೇಟೆ ಸಂಚಾರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.