ADVERTISEMENT

ಮೂರು ಮನೆಗಳಲ್ಲಿ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:55 IST
Last Updated 12 ಜೂನ್ 2011, 19:55 IST

ಬೆಂಗಳೂರು: ಯಶವಂತಪುರದ ಪ್ಲಾಟಿನಂ ಸಿಟಿ ಅಪಾರ್ಟ್ ಮೆಂಟ್‌ನ ಮೂರು ಮನೆಗಳ ಬಾಗಿಲು ಮುರಿದ ದುಷ್ಕರ್ಮಿಗಳು ಹಣ ಹಾಗೂ ಚಿನ್ನಾಭರಣ ದೋಚಿರುವ ಘಟನೆ ಶನಿವಾರ ನಡೆದಿದೆ.

ಅಪಾರ್ಟ್‌ಮೆಂಟ್‌ನ ಸಿ ಬ್ಲಾಕ್‌ನ ಹತ್ತನೇ ಮಹಡಿಯಲ್ಲಿರುವ ರಾಧಾ ಎಸ್ ಕವಲೇಕರ್ ಎಂಬುವರ ಮನೆಯ ಬಾಗಿಲು ಮುರಿದು ಎರಡೂವರೆ ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ದೋಚಿದ್ದಾರೆ.

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಅವರು ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದರು. ರಾತ್ರಿ ಬಂದಾಗ ಕಳವಾಗಿದ್ದು ಗೊತ್ತಾಗಿದೆ. ಅಲ್ಮೇರಾದಲ್ಲಿ ಆರಭಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇದೇ ಅಪಾರ್ಟ್‌ಮೆಂಟ್‌ನ ಡಿ ಬ್ಲಾಕ್‌ನ ಹನ್ನೊಂದನೇ ಮಹಡಿಯಲ್ಲಿರುವ ಸುತ್ತಾಪ ಮುಖರ್ಜಿ ಎಂಬುವರ ಮನೆಯ ಬಾಗಿಲನ್ನು ಮುರಿದು ಮೂವತ್ತೈದು ಸಾವಿರ ರೂಪಾಯಿ ಮೌಲ್ಯದ ಆಭರಣ ಕಳವು ಮಾಡಿದ್ದಾರೆ. ಮುಖರ್ಜಿ ಅವರು ಬೆಳಿಗ್ಗೆ ಒಂಬತ್ತು ಗಂಟೆಗೆ ಕಚೇರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕಳವು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿ.ಎ ಕುಲಕರ್ಣಿ ಎಂಬುವರ ಮನೆಯಲ್ಲಿಯೂ ಕಳವು ಮಾಡಲಾಗಿದೆ. ಡಿ ಬ್ಲಾಕ್‌ನ ಏಳನೇ ಮಹಡಿಯಲ್ಲಿ ಅವರ ಮನೆ ಇದ್ದು ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ತೊಂಬತ್ತು ಸಾವಿರ ರೂಪಾಯಿ ಬೆಲೆ ಬಾಳುವ ಆಭರಣ ದೋಚಿದ್ದಾರೆ.

ಪ್ಲಾಟಿನಂ ಸಿಟಿಯಲ್ಲಿ ಒಟ್ಟು 1400 ಫ್ಲಾಟ್‌ಗಳಿವೆ. ಇಲ್ಲಿ ಅರವತ್ತಕ್ಕೂ ಹೆಚ್ಚು ಮಂದಿ ಸೆಕ್ಯುರಿಟಿ ಗಾರ್ಡ್‌ಗಳು ವಿವಿಧ ಪಾಳಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮೂರೂ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.