ADVERTISEMENT

ಮೂಲ ವಿಜ್ಞಾನ ಅಧ್ಯಯನ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಬೆಂಗಳೂರು: `ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮಾತ್ರ ಭಾರತ ಜಗತ್ತಿನ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಈ ಕ್ಷೇತ್ರಗಳಲ್ಲಿ ಹೆಚ್ಚಿನ ಹಾಗೂ ಮೂಲ ವಿಜ್ಞಾನಗಳ ಅಧ್ಯಯನಕ್ಕೆ ತೊಡಗಬೇಕು~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪ್ರಭುದೇವ್ ಕರೆ ನೀಡಿದರು.

ನಗರದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 2011-12 ನೇ ಸಾಲಿನ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,      `ವಿದ್ಯಾರ್ಥಿಗಳು ಮೂಲ ವಿಜ್ಞಾನ ಹಾಗೂ ಸಂಶೋಧನಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ರಾಷ್ಟ್ರದ ಬೆಳವಣಿಗೆಗೆ ತಮ್ಮ ಕೊಡುಗೆ ಸಲ್ಲಿಸಬೇಕು~ ಎಂದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹಮಾನ ವಿತರಿಸಲಾಯಿತು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್.ನಿರಂಜನ ಆರಾಧ್ಯ, ಗೌರವ ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ, ರಾಜ್ಯ ಸಂಚಾಲಕ ಪ್ರೊ.ಎಸ್.ವಿ.ಸಂಕನೂರ, ಕಾರವಾರದಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜಲಜೀವಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ವಿ.ಎನ್.ನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು: ಗ್ರಾಮೀಣ ವಿಭಾಗ: ಪ್ರಥಮ ಸ್ಥಾನ- ಶಿರಸಿಯ ಕಾಳಿಕಾ ಭವಾನಿ ಆಂಗ್ಲ ಪ್ರೌಢಶಾಲೆಯ ಪವನ್ ಹೆಗಡೆ ಮತ್ತು ನಿರಂಜನ ಎಸ್. ಹೆಗಡೆ, ದ್ವಿತೀಯ ಸ್ಥಾನ- ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ರಜತ್ ರಾವ್ ಮತ್ತು ವಿನಯ್ ಸತೀಶ್ ಹಾಗೂ ತೃತೀಯ ಸ್ಥಾನ- ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ರಮೇಶ್ ಮತ್ತು ಅನ್ವಿತ್.
ನಗರ ವಿಭಾಗ: ಪ್ರಥಮ ಸ್ಥಾನ- ಬೆಂಗಳೂರು ಉತ್ತರ ಜಿಲ್ಲೆಯ ವಿ.ವಿ.ಎಸ್ ಸರ್ದಾರ್ ಪಟೇಲ್ ಪ್ರೌಢಶಾಲೆಯ ವಿ. ಶ್ರೀಧರ ಮತ್ತು ದೇವ ಆನಂದ್, ದ್ವಿತೀಯ ಸ್ಥಾನ- ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆಯ ರೋಹನ ಅಧಿಕಾರಿ ಮತ್ತು ಎಂ.ಪ್ರಣವ್ ಹಾಗೂ ತೃತೀಯ ಸ್ಥಾನ- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಟಿಜನ್ ಪ್ರೌಢಶಾಲೆಯ ಎಚ್.ಎಸ್.ರಾಜರಾಜೇಶ್ವರಿ ಮತ್ತು ಎಸ್.ಅರವಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.