ADVERTISEMENT

ಮೆಟ್ರೊ ನೌಕರರ ಜತೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ಬೆಂಗಳೂರು: ಮುಷ್ಕರ ನಡೆಸಲು ಮುಂದಾಗಿರುವ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ನೌಕರರ ಸಂಘದ ಪದಾಧಿಕಾರಿಗಳ ಜತೆ ನಿಗಮದ ಅಧಿಕಾರಿಗಳು ಸೋಮವಾರ ಮೊದಲ ಸುತ್ತಿನ ಚರ್ಚೆ ನಡೆಸಿದರು.

‘ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿದ ಅಧಿಕಾರಿಗಳ ತಂಡ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದೆ’ ಎಂದು ನೌಕರರ ಸಂಘದ ಮುಖಂಡರು ಪ್ರಜಾವಾಣಿಗೆ ತಿಳಿಸಿದರು. 

‘ಮೂಲವೇತನ, ತುಟ್ಟಿಭತ್ಯೆ ಹಾಗೂ ಮನೆಭತ್ಯೆ ಹೊರತುಪಡಿಸಿ ಬೇರಾವ ಸವಲತ್ತನ್ನೂ ನಿಗಮ ನಮಗೆ ನೀಡುತ್ತಿಲ್ಲ. ಸಿಬ್ಬಂದಿಯ ವೇತನ ಪರಿಷ್ಕರಣೆ, ವಸತಿಗೃಹ  ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ವಿಶೇಷ ಭತ್ಯೆ, ಕ್ಯಾಂಟೀನ್‌ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದ್ದೇವೆ’ ಎಂದು ಸಂಘದ ಉಪಾಧ್ಯಕ್ಷ ಎಸ್‌.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬುಧವಾರ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದರು.

‘ದೇಶದ ಇತರ ಮೆಟ್ರೊ ನಿಗಮಗಳಿಗೆ ಹೋಲಿಸಿದರೆ ನಮ್ಮಲ್ಲಿನ ಸಿಬ್ಬಂದಿಗೆ ಕಡಿಮೆ ವೇತನ ಸಿಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹೈಕೋರ್ಟ್‌ ಸೂಚನೆ ನೀಡಿದ ಬಳಿಕ ನಡೆದ ಮೊದಲ ಮಾತುಕತೆ ಇದಾಗಿದೆ.

ಸಹಾಯಕ ಮಾರ್ಗ ಮೇಲ್ವಿಚಾರಕರು (ಎಎಲ್‌ಎಸ್‌) ತಿಂಗಳಲ್ಲಿ 10 ದಿನಗಳು ರೈಲು ಚಾಲಕರಾಗಿ ಕೆಲಸ ಮಾಡಬೇಕು ಎಂದು ನಿಗಮವು ಸೋಮವಾರ ಆದೇಶ ಹೊರಡಿಸಿದೆ. ಇದುವರೆಗೆ ಅವರು ತಿಂಗಳಲ್ಲಿ 8 ಗಂಟೆ ಮಾತ್ರ ರೈಲು ಚಾಲಕರಾಗಿ ಕಾರ್ಯನಿರ್ವಹಿಸಬೇಕಿತ್ತು. ಕಪ್ಪು ಬ್ಯಾಡ್ಜ್‌ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಎಎಲ್‌ಎಸ್‌ಗಳೂ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.