ADVERTISEMENT

ಮೇ 4ರಿಂದ 10ರವರೆಗೆ ಪುಸ್ತಕೋತ್ಸವಕ್ಕೆ ಅನುಮತಿ

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2014, 19:52 IST
Last Updated 10 ಫೆಬ್ರುವರಿ 2014, 19:52 IST
ಮೇ 4ರಿಂದ 10ರವರೆಗೆ ಪುಸ್ತಕೋತ್ಸವಕ್ಕೆ ಅನುಮತಿ
ಮೇ 4ರಿಂದ 10ರವರೆಗೆ ಪುಸ್ತಕೋತ್ಸವಕ್ಕೆ ಅನುಮತಿ   

ಬೆಂಗಳೂರು: ಪುಸ್ತಕ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ‘ಬೆಂಗಳೂರು ಪುಸ್ತಕೋತ್ಸವ’ವನ್ನು ಅರಮನೆ ಮೈದಾನ­ದಲ್ಲಿ ಏಳು ದಿನ ನಡೆಸಲು ಅನುಮತಿ ನೀಡು­ವಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ. ಎಲ್ಲವೂ ಸುಗಮವಾಗಿ ನಡೆದರೆ, ಪುಸ್ತಕ ಪ್ರಿಯರು ಮೇ 4ರಿಂದ 10 ನಡುವಿನ ಅವಧಿಯಲ್ಲಿ ಅರಮನೆ ಮೈದಾನಕ್ಕೆ ಭೇಟಿ ನೀಡಿ, ಸುಂದರ ಪುಸ್ತಕಗಳ ಮೈದಡವಬಹುದು. ತಮಗಿಷ್ಟವಾಗಿದ್ದನ್ನು ಖರೀದಿ­ಸಬಹುದು.

ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ ಅರಮನೆ ಮೈದಾನದಲ್ಲಿ 10 ವರ್ಷ­ಗಳಿಂದ ಪುಸ್ತಕೋತ್ಸವ ಆಯೋಜಿಸುತ್ತಿದೆ.  ಆದರೆ ಈ ಸಾಲಿನ ಪುಸ್ತಕೋತ್ಸವವನ್ನು 10 ದಿನಗಳ ಕಾಲ ಆಯೋಜಿಸಲು ಅರಮನೆ ಮೈ­ದಾನದಲ್ಲಿ ಅವಕಾಶ ನೀಡಲು ಆಗದು, ಆದರೆ ಮೂರು ದಿನ ನಡೆಸಲು ಅವಕಾಶ ನೀಡಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೇಳಿತ್ತು.

ಪುಸ್ತಕೋತ್ಸವವನ್ನು 10 ದಿನ ನಡೆಸಲು ಅವ­ಕಾಶ ನೀಡಬೇಕು ಎಂದು ಕೋರಿ ಸಂಘ ಹೈಕೋರ್ಟ್‌­ನಲ್ಲಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ನ್ಯಾಯ­ಮೂರ್ತಿ ಎ.ಎಸ್‌. ಬೋಪಣ್ಣ ಅವರು ನಡೆಸಿ­ದರು. ‘ಮೂರು ದಿನ ನಡೆಸಲು ಅವಕಾಶ ನೀಡಿ­ದ್ದೀರಿ. ಅದನ್ನು ಏಳು ದಿನಕ್ಕೆ ಹೆಚ್ಚಿಸಿ. ಸಾಧ್ಯ­ವಾದಷ್ಟು­ಮಟ್ಟಿಗೆ ಮೇ 4ರಿಂದ ಮೇ 10ರವರೆಗೆ ಅವಕಾಶ ನೀಡಿ. ಈ ಸಂದರ್ಭದಲ್ಲಿ ಬೇರೆ ಕಾರ್ಯ­ಕ್ರಮಗಳಿಗೆ ಅದೇ ಜಾಗದಲ್ಲಿ ನಡೆಯದಂತೆ ನೋಡಿ­ಕೊಳ್ಳಿ’ ಎಂದು ಸರ್ಕಾರಕ್ಕೆ ಸೋಮ­ವಾರ ಆದೇಶಿಸಿದೆ.

ವಾಣಿಜ್ಯ ಉದ್ದೇಶದ ಉತ್ಸವ ನಡೆಸಲು 10 ದಿನ ಅವಕಾಶ ನೀಡಲಾಗದು ಎಂದು ಇಲಾಖೆ ಹೇಳಿತ್ತು. ‘ಪುಸ್ತಕೋತ್ಸವವನ್ನು ಇತರ ವಾಣಿಜ್ಯ ಚಟುವಟಿಕೆ­ಗಳ ಜೊತೆ ಹೋಲಿಸಲಾಗದು. ಪುಸ್ತಕಗಳ ಉತ್ಸವಕ್ಕೆ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಬರುತ್ತಾರೆ. ಇದೊಂದು ಸಾಹಿತ್ಯಕ ಕಾರ್ಯ’ ಎಂದು ಪೀಠ ಇಲಾಖೆಗೆ ಕಿವಿಮಾತು ಹೇಳಿ, ಅರ್ಜಿ ಇತ್ಯರ್ಥ­ಪಡಿಸಲಾಗಿದೆ.

ಬುಧವಾರ ಸಭೆ: ಹೈಕೋರ್ಟ್‌ ಆದೇಶದ ಪ್ರತಿ ನಮಗೆ ಇನ್ನೂ ದೊರೆತಿಲ್ಲ. ಸಂಘದ ಪ್ರಮುಖರ ಸಭೆ ಬುಧವಾರಕ್ಕೆ ನಿಗದಿಯಾಗಿದೆ. ಪುಸ್ತಕೋತ್ಸವ ನಡೆಸಬೇಕೋ, ಬೇಡವೋ ಎಂಬ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಘದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.