
ಬೆಂಗಳೂರು: ಪುಸ್ತಕ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ‘ಬೆಂಗಳೂರು ಪುಸ್ತಕೋತ್ಸವ’ವನ್ನು ಅರಮನೆ ಮೈದಾನದಲ್ಲಿ ಏಳು ದಿನ ನಡೆಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಎಲ್ಲವೂ ಸುಗಮವಾಗಿ ನಡೆದರೆ, ಪುಸ್ತಕ ಪ್ರಿಯರು ಮೇ 4ರಿಂದ 10 ನಡುವಿನ ಅವಧಿಯಲ್ಲಿ ಅರಮನೆ ಮೈದಾನಕ್ಕೆ ಭೇಟಿ ನೀಡಿ, ಸುಂದರ ಪುಸ್ತಕಗಳ ಮೈದಡವಬಹುದು. ತಮಗಿಷ್ಟವಾಗಿದ್ದನ್ನು ಖರೀದಿಸಬಹುದು.
ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ ಅರಮನೆ ಮೈದಾನದಲ್ಲಿ 10 ವರ್ಷಗಳಿಂದ ಪುಸ್ತಕೋತ್ಸವ ಆಯೋಜಿಸುತ್ತಿದೆ. ಆದರೆ ಈ ಸಾಲಿನ ಪುಸ್ತಕೋತ್ಸವವನ್ನು 10 ದಿನಗಳ ಕಾಲ ಆಯೋಜಿಸಲು ಅರಮನೆ ಮೈದಾನದಲ್ಲಿ ಅವಕಾಶ ನೀಡಲು ಆಗದು, ಆದರೆ ಮೂರು ದಿನ ನಡೆಸಲು ಅವಕಾಶ ನೀಡಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೇಳಿತ್ತು.
ಪುಸ್ತಕೋತ್ಸವವನ್ನು 10 ದಿನ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ಸಂಘ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ನಡೆಸಿದರು. ‘ಮೂರು ದಿನ ನಡೆಸಲು ಅವಕಾಶ ನೀಡಿದ್ದೀರಿ. ಅದನ್ನು ಏಳು ದಿನಕ್ಕೆ ಹೆಚ್ಚಿಸಿ. ಸಾಧ್ಯವಾದಷ್ಟುಮಟ್ಟಿಗೆ ಮೇ 4ರಿಂದ ಮೇ 10ರವರೆಗೆ ಅವಕಾಶ ನೀಡಿ. ಈ ಸಂದರ್ಭದಲ್ಲಿ ಬೇರೆ ಕಾರ್ಯಕ್ರಮಗಳಿಗೆ ಅದೇ ಜಾಗದಲ್ಲಿ ನಡೆಯದಂತೆ ನೋಡಿಕೊಳ್ಳಿ’ ಎಂದು ಸರ್ಕಾರಕ್ಕೆ ಸೋಮವಾರ ಆದೇಶಿಸಿದೆ.
ವಾಣಿಜ್ಯ ಉದ್ದೇಶದ ಉತ್ಸವ ನಡೆಸಲು 10 ದಿನ ಅವಕಾಶ ನೀಡಲಾಗದು ಎಂದು ಇಲಾಖೆ ಹೇಳಿತ್ತು. ‘ಪುಸ್ತಕೋತ್ಸವವನ್ನು ಇತರ ವಾಣಿಜ್ಯ ಚಟುವಟಿಕೆಗಳ ಜೊತೆ ಹೋಲಿಸಲಾಗದು. ಪುಸ್ತಕಗಳ ಉತ್ಸವಕ್ಕೆ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಬರುತ್ತಾರೆ. ಇದೊಂದು ಸಾಹಿತ್ಯಕ ಕಾರ್ಯ’ ಎಂದು ಪೀಠ ಇಲಾಖೆಗೆ ಕಿವಿಮಾತು ಹೇಳಿ, ಅರ್ಜಿ ಇತ್ಯರ್ಥಪಡಿಸಲಾಗಿದೆ.
ಬುಧವಾರ ಸಭೆ: ಹೈಕೋರ್ಟ್ ಆದೇಶದ ಪ್ರತಿ ನಮಗೆ ಇನ್ನೂ ದೊರೆತಿಲ್ಲ. ಸಂಘದ ಪ್ರಮುಖರ ಸಭೆ ಬುಧವಾರಕ್ಕೆ ನಿಗದಿಯಾಗಿದೆ. ಪುಸ್ತಕೋತ್ಸವ ನಡೆಸಬೇಕೋ, ಬೇಡವೋ ಎಂಬ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಘದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.