ADVERTISEMENT

ಮೋದಿ ಜತೆ ಬಿಜೆಪಿ ಮುಖಂಡರ ಸಭೆ ನಾಳೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:53 IST
Last Updated 27 ಅಕ್ಟೋಬರ್ 2017, 19:53 IST

ಬೆಂಗಳೂರು: ಇದೇ 29 ರಂದು ರಾಜ್ಯಕ್ಕೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಜತೆ ವಿಧಾನಸಬಾ ಚುನಾವಣೆ ಕಾರ್ಯತಂತ್ರಗಳ ಬಗ್ಗೆ  ರಾಜ್ಯ ಬಿಜೆಪಿ ಹಿರಿಯ ಮುಖಂಡರು ಚರ್ಚೆ ನಡೆಸಲಿದ್ದಾರೆ.

ಅಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ ‘ಸೌಂದರ್ಯ ಲಹರಿ’ ಪಾರಾಯಣ ಕಾರ್ಯಕ್ರಮ ಮುಗಿಸಿ ಬೀದರ್‌ಗೆ ತೆರಳುವುದಕ್ಕೆ ಮೊದಲು ಮೋದಿ ಜತೆ ಈ ಚರ್ಚೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕರ್ನಾಟಕ ಪರಿವರ್ತನೆ ರಥ ಯಾತ್ರೆ ಮತ್ತು ಚುನಾವಣೆಗಾಗಿ ನಡೆಸಿರುವ ಸಿದ್ಧತೆಗಳ ಬಗ್ಗೆ ಮೋದಿಗೆ ವರದಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಮೋದಿಯವರೂ ರಾಜ್ಯ ನಾಯಕರಿಗೆ ಸಲಹೆ– ಸೂಚನೆಗಳನ್ನು ನೀಡಲಿದ್ದಾರೆ. ಚರ್ಚೆಗೆ ಸ್ಥಳ ಮತ್ತು ಸಮಯ ನಿಗದಿ ಆಗಬೇಕು ಎಂದು ಮೂಲಗಳು ಹೇಳಿವೆ.

ADVERTISEMENT

ಟಿ.ವಿ ಚರ್ಚೆಗಳಲ್ಲಿ ಮುಖಂಡರು ಇರಬೇಕು: ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ನಡೆಯುವ ರಾಜಕೀಯ ಚರ್ಚೆಗಳಲ್ಲಿ ಪಕ್ಷದ ನಿಲುವು ಮಂಡಿಸಲು ಹಿರಿಯ ನಾಯಕರು ಭಾಗವಹಿಸದೇ ಇರುವ ಬಗ್ಗೆ ಪ್ರಕಾಶ್‌ ಜಾವಡೇಕರ್‌ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಚರ್ಚೆಗಳಲ್ಲಿ ವಿರೋಧ ಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಹಿರಿಯ ನಾಯಕರು ಭಾಗವಹಿಸಬೇಕು. ವಿವಿಧ ವಿಷಯಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಮತ್ತು ಪರಿಣಾಮಕಾರಿಯಾಗಿ ಮಾತನಾಡುವವರನ್ನೇ ನಿಯೋಜಿಸಬೇಕು ಎಂದೂ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.