ಬೆಂಗಳೂರು: ‘ಪೆಟ್ರೋಲ್ ಬೆಲೆ ₹85, ಅಡುಗೆ ಅನಿಲ ₹825, ದವಸ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಇದನ್ನು ತಡೆಯುವಲ್ಲಿ ವಿಫಲವಾಗಿರುವ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ರಾಜರಾಜ್ವೇಶರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹1 ಬೆಲೆ ಹೆಚ್ಚಾದರೂ ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಮುಖಂಡರು, ಈಗ ಮೌನವಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ರಾಜ್ಯಕ್ಕೆ ಜನಪರ ಆಡಳಿತ ನೀಡಲು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವಂತೆ ನಾನು ಮತ್ತು ಅಣ್ಣ ಶ್ರಮಿಸಿದ್ದೇವೆ. ನಾವೂ ರೈತರ ಮಕ್ಕಳು. ಅಭಿವೃದ್ಧಿಗೆ ಶ್ರಮಿಸಲು ಈ ಚುನಾವಣೆಯಲ್ಲಿ ನಮಗೆ ಅವಕಾಶ ಕಲ್ಪಿಸಿ’ ಎಂದರು.
ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್ಕುಮಾರ್, ‘ಐದು ವರ್ಷಗಳಲ್ಲಿ ಮುನಿರತ್ನ ಅವರು ಎಲ್ಲಾ ಉದ್ಯಾನವನಗಳ ಅಭಿವೃದ್ಧಿ, ಕಾವೇರಿ ನೀರು ಸರಬರಾಜು, ಒಳಚರಂಡಿ, ಸಾವಿರಾರು ಜನರಿಗೆ ಮನೆ, ನಿವೇಶನ ಹಂಚಿಕೆ, ಆಸ್ಪತ್ರೆ, ಶಾಲಾ-ಕಾಲೇಜು, ಆಸ್ಪತ್ರೆ, ರಸ್ತೆಗಳ ಅಭಿವೃದ್ಧಿ, ಡಾಂಬರೀಕರಣ ಮಾಡಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.