ADVERTISEMENT

ಮೌಢ್ಯ ಹೆಚ್ಚಳ ದುರದೃಷ್ಟಕರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:50 IST
Last Updated 28 ಫೆಬ್ರುವರಿ 2011, 19:50 IST

ಬೆಂಗಳೂರು: ‘ವಿಜ್ಞಾನ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬೆಳವಣಿಗೆಯಾಗಿದೆ. ಆದರೆ ಮೌಢ್ಯ ಕೂಡ ಹೆಚ್ಚಾಗುತ್ತಿರುವುದು ದುರದೃಷ್ಟಕರ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರು ಹೇಳಿದರು. ನಗರದ ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ನಾಡು ನುಡಿ ಹಬ್ಬ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಂದೆಡೆ ವಿಜ್ಞಾನ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದರೆ, ಇನ್ನೊಂದೆಡೆ ಅಂತರಿಕ್ಷದ ವಿಸ್ತಾರವಾದ ವ್ಯಾಪ್ತಿ ಬಯಲಾಗುತ್ತಿದ್ದು, ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಇವುಗಳ ನಡುವೆ ಮೌಢ್ಯ ಕೂಡ ಅಷ್ಟೇ ಪ್ರಬಲವಾಗುತ್ತಿರುವುದು ವಿಚಿತ್ರ’ ಎಂದರು. ‘ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿರುವ ವಿಧಾನಸೌಧಕ್ಕೆ ಮಾಟ- ಮಂತ್ರ ಮಾಡಿಸುವುದು. ಅದಕ್ಕೆಂದು ಕೆಲವು ಪ್ರವೇಶ ದ್ವಾರಗಳನ್ನು ಮುಚ್ಚುವುದು.

ಸಚಿವರುಗಳು ವಾಸ್ತು ಪ್ರಕಾರವಾಗಿ ತಮ್ಮ ಕಚೇರಿ, ಮನೆಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳುವುದು. ಸ್ವಾಮೀಜಿಗಳಿಗೆ ಕಿರೀಟಧಾರಣೆ ಮಾಡುವಂತಹ ಘಟನೆಗಳನ್ನು ವಿದ್ಯಾರ್ಥಿಗಳು ತಾರ್ಕಿಕವಾಗಿ ವಿಶ್ಲೇಷಿಸಬೇಕು’ ಎಂದರು. ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಪ್ರೊ.ಕೆ.ವಿ. ಕೋದಂಡರಾಮಯ್ಯ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಸಿದ್ದಪ್ಪ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.