ADVERTISEMENT

ಯಡಿಯೂರಪ್ಪ ಬಿಜೆಪಿ ತೊರೆಯುತ್ತಾರೆ: ರಾಮುಲು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯಿಂದ ದೂರವಾಗಿ ಹೊಸ ಪಕ್ಷ ಕಟ್ಟುವ ಸಾಧ್ಯತೆಗಳು ಹೆಚ್ಚಿವೆ ಎಂದು ಪಕ್ಷೇತರ ಶಾಸಕ ಬಿ. ಶ್ರೀರಾಮುಲು ಭವಿಷ್ಯ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಯಡಿಯೂರಪ್ಪ ಅವರ ಮುಂದಿನ ನಡೆ ಕುರಿತು ಹಲವು ಶಾಸಕರ ಜೊತೆ ಮಾತನಾಡಿದ್ದೇನೆ~ ಎಂದರು.

`ಪ್ರಸ್ತುತ ಬಿಜೆಪಿಯಲ್ಲಿರುವ ನನ್ನ ಬೆಂಬಲಿಗ ಶಾಸಕರು ಇನ್ನೂ ಕೆಲ ಕಾಲ ಅದೇ ಪಕ್ಷದಲ್ಲಿ ಮುಂದುವರಿಯಲಿದ್ದಾರೆ. ರಾಜಕೀಯ ಪರಿಸ್ಥಿತಿ ಅವಲೋಕಿಸಿ, ಸೂಕ್ತ ಸಂದರ್ಭದಲ್ಲಿ ಅವರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ~ ಎಂದು ಹೇಳಿದರು.

ADVERTISEMENT

`ಮಾರ್ಚ್‌ನಲ್ಲಿ ಪಕ್ಷ ಸ್ಥಾಪನೆ~: `ನನ್ನ ನೇತೃತ್ವದ ನೂತನ ಪಕ್ಷ ಮಾರ್ಚ್ ಮೊದಲ ವಾರದಲ್ಲಿ ಜನ್ಮ ತಳೆಯಲಿದೆ. ಪಕ್ಷದ ಕಚೇರಿಯನ್ನು ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಏಕಕಾಲದಲ್ಲಿ ಆರಂಭಿಸಲಾಗುವುದು. ಪಕ್ಷದ ಹೆಸರನ್ನು ಅದೇ ಸಂದರ್ಭದಲ್ಲಿ ಪ್ರಕಟಿಸಲಾಗುವುದು~ ಎಂದು ಅವರು ಹೇಳಿದರು.

ಕಾರ್ಪೊರೆಟ್ ಕಚೇರಿಯ ಮಾದರಿಯಲ್ಲೇ ಪಕ್ಷದ ಕಚೇರಿಯನ್ನು ಸಿದ್ಧಗೊಳಿಸಲಾಗುವುದು. ಕಚೇರಿಯಲ್ಲಿ ಕುಳಿತೇ ಪಕ್ಷದ ಜಿಲ್ಲಾ ಘಟಕಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಪಕ್ಷದ ಕಚೇರಿ ಉದ್ಘಾಟನೆಯಾದ ಮಾರನೆಯ ದಿನದಿಂದಲೇ ರಾಜ್ಯ ಪ್ರವಾಸ ಆರಂಭಿಸಲಾಗುವುದು. ಕೊಪ್ಪಳ, ಬಳ್ಳಾರಿ, ರಾಯಚೂರು, ಗದಗ ಮತ್ತಿತರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.