ಯಲಹಂಕ: ಕಟ್ಟಡ ನಿರ್ಮಿಸುವ ಸಲುವಾಗಿ ಪಿಲ್ಲರ್ ನಿಲ್ಲಿಸಲು ಗುಂಡಿಗಳನ್ನು ಅಗೆಯುತ್ತಿದ್ದ ಸಂದರ್ಭದಲ್ಲಿ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಐವರು ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಬಾಗಲೂರು ಮುಖ್ಯರಸ್ತೆಯ ಶಿವಪುರದಲ್ಲಿ ಭಾನುವಾರ ನಡೆದಿದೆ.
ಮೂಲತಃ ಆಂಧ್ರಪ್ರದೇಶದ ಗೋರಂಟ್ಲಾ ತಾಲ್ಲೂಕಿನ ಪೂಲಚೆಟ್ಟಿಪಲ್ಲಿ ಗ್ರಾಮದ ನಿವಾಸಿಗಳಾದ ಸುಬ್ಬಪ್ಪಯ್ಯ (55), ವೆಂಕಟರಮಣಯ್ಯ (55), ಗಂಗೊಳ್ಯಪ್ಪ (45), ರತ್ನಮ್ಮ (40) ಹಾಗೂ ರಮಾದೇವಿ (30) ಗಾಯಗೊಂಡವರು.
ಶಿವಪುರದ ಶಿವನ ದೇವಸ್ಥಾನದ ಹಿಂಭಾಗದಲ್ಲಿ ಗಿರಿಗೌಡ ಎಂಬುವರಿಗೆ ಸೇರಿದ ನಿವೇಶನವಿದೆ. ಆ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಇತ್ತೀಚೆಗೆ ಜೆಸಿಬಿ ಯಂತ್ರದಿಂದ ಸುಮಾರು 10 ಅಡಿಗಳಷ್ಟು ಆಳದ ಗುಂಡಿ ತೆಗೆಯಲಾಗಿತ್ತು. ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ 23 ಮಂದಿ ಕಾರ್ಮಿಕರು ಪಿಲ್ಲರ್ ನಿಲ್ಲಿಸಲು ಗುಂಡಿಗಳನ್ನು ತೆಗೆಯುತ್ತಿದ್ದರು. ಈ ವೇಳೆ ಮಣ್ಣು ಕುಸಿದು ಅವರ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯರು ಮಣ್ಣಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆದು, ಪೊಲೀಸರ ನೆರವಿನಿಂದ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯಲ್ಲಿ ಸುಬ್ಬಪ್ಪಯ್ಯ ಅವರ ಎಡಗಾಲಿನ ಮೂಳೆ ಮತ್ತು ರಮಾದೇವಿ ಅವರ ಬಲಗಾಲು ಮುರಿದಿದೆ. ವೆಂಕಟರಮಣ ಅವರ ಹೊಟ್ಟೆ ಮೇಲೆ ಕಲ್ಲು ಬಿದ್ದಿರುವುದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.