ADVERTISEMENT

ಯುವಕನ ಕೊಲೆ- ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಆರು ಮಂದಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್‌ಪಿಸಿ ಲೇಔಟ್‌ನ ನವೀನಕುಮಾರಿ ಎಂಬುವರ ಮಗ ಭರತ್ ರಾಹುಲ್ (17) ಕೊಲೆಯಾದವರು. ಆರೋಪಿಗಳಾದ ಬ್ಯಾಟರಾಯನಪುರದ ಪೂರ್ಣ (20), ಕಳ್ಳ ದೇವು (19), ಮೋಹನ್ (20), ಪ್ರಭು (21), ಅರ್ಜುನ್ (19) ಮತ್ತು ಅಪ್ತಾಪ್ತನೊಬ್ಬನನ್ನು ಘಟನೆ ನಡೆದ 24 ಗಂಟೆಗಳ ಒಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.

ನಿಖಿಲ್ ಮತ್ತು ಭರತ್ ರಾಹುಲ್ ಪರಿಯಚಯಸ್ಥರು. ಬೈಕ್ ನೀಡುವಂತೆ ಭರತ್, ನಿಖಿಲ್‌ನನ್ನು ಬುಧವಾರ ಬೆಳಿಗ್ಗೆ ಕೇಳಿದ್ದ. ಆದರೆ ಆತ ಬೈಕ್ ನೀಡಲು ನಿರಾಕರಿಸಿದ್ದ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ನಿಖಿಲ್‌ನನ್ನು ಭರತ್ ಹೊಡೆದಿದ್ದ ಎಂದು ಚಂದ್ರಾಲೇಔಟ್ ಠಾಣೆ ಇನ್‌ಸ್ಪೆಕ್ಟರ್ ರಾಜೇಂದ್ರ ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

`ಈ ವಿಷಯವನ್ನು ನಿಖಿಲ್ ಸ್ನೇಹಿತರಿಗೆ ತಿಳಿಸಿದ್ದ. ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ ಅವರು ಕಾರಿನಲ್ಲಿ ಭರತ್‌ನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಬಿಟ್ಟು ಹೋಗಿದ್ದರು. ಅಸ್ವಸ್ಥನಾಗಿದ್ದ ಭರತ್‌ನನ್ನು ನಾವೇ ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಆತ ಯಾರು ಎಂದು ಪತ್ತೆಯಾಗಿರಲಿಲ್ಲ. ಮಗ ಮನೆಗೆ ಬಾರದಿದ್ದಾಗ ಆತಂಕಗೊಂಡ ನವೀನಕುಮಾರಿ ಅವರು ಠಾಣೆಗೆ ದೂರು ನೀಡಿದ್ದರು. ಅವರು ನೀಡಿದ್ದ ದೂರನ್ನು ಪರಿಶೀಲಿಸಿದಾಗ ಅಸ್ವಸ್ಥನಾಗಿದ್ದ ವ್ಯಕ್ತಿ ಭರತ್ ಎಂದು ಗೊತ್ತಾಯಿತು~ ಎಂದು ಅವರು ಮಾಹಿತಿ ನೀಡಿದರು.

ಆಸ್ಪತ್ರೆಯಲ್ಲಿದ್ದ ಭರತ್ ಬುಧವಾರ ರಾತ್ರಿ ಸಾವನ್ನಪ್ಪಿದ್ದಾನೆ. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದು ಎಲ್ಲರನ್ನೂ ಬಂಧಿಸಲಾಯಿತು. ಆರೋಪಿಗಳೆಲ್ಲ ಐಟಿಐ, ಪಿಯುಸಿ ವಿದ್ಯಾರ್ಥಿಗಳು. ಕೊಲೆಯಾದ ಭರತ್ ಸಹ ಐಟಿಐ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.