ಬೆಂಗಳೂರು: ಇಂದಿರಾ ನಗರದ 100 ಅಡಿ ರಸ್ತೆಯಲ್ಲಿ ಯುವತಿಯೊಬ್ಬರ ಜತೆಯಲ್ಲಿ ದುಷ್ಕರ್ಮಿಗಳಿಬ್ಬರು ಅನುಚಿತವಾಗಿ ವರ್ತಿಸಿದ್ದು, ಗುಂಪು ಕಟ್ಟಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.
‘ಮೇ 9ರಂದು ನಡೆದಿದ್ದ ಘಟನೆ ಸಂಬಂಧ ದೂರು ನೀಡಲು ಜೀವನ್ಬಿಮಾ ನಗರ ಠಾಣೆಗೆ ಹೋಗಿದ್ದೆ. ಚುನಾವಣೆ ನೆಪ ಹೇಳಿದ್ದ ಪೊಲೀಸರು, ದೂರು ಪಡೆಯಲು ನಿರಾಕರಿಸಿದ್ದರು. ಘಟನೆಯನ್ನು ಹೆಚ್ಚುವರಿ ಪೊಲೀಸ್ ಕಮಿಷನರ್ ಗಮನಕ್ಕೆ ತಂದ ಬಳಿಕವೇ ಮೇ 16ರಂದು ಪ್ರಕರಣ ದಾಖಲಿಸಿಕೊಂಡರು’ ಎಂದು ದೂರುದಾರರು ಆರೋಪಿಸಿದ್ದಾರೆ.
ಪೊಲೀಸರು, ‘ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವಕ, ತಮ್ಮ ಸ್ನೇಹಿತೆಯ ಜತೆಯಲ್ಲಿ ಊಟಕ್ಕೆ ಹೋದಾಗ ಈ ಘಟನೆ ನಡೆದಿದೆ. ಅವರೇ ತಡವಾಗಿ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಇದ್ದು, ಪತ್ತೆ ಹಚ್ಚುತ್ತಿದ್ದೇವೆ’ ಎಂದರು.
‘ಊಟಕ್ಕೆಂದು ಸ್ನೇಹಿತೆ ಜತೆಗೆ ಎಂಪೈರ್ ಹೋಟೆಲ್ಗೆ ಹೋಗಿದ್ದೆ. ಊಟ ಮುಗಿಸಿಕೊಂಡು ಮೇ 9ರ ನಸುಕಿನ 2 ಗಂಟೆ ಸುಮಾರಿಗೆ ಮನೆಗೆ ವಾಪಸ್ ಹೊರಟಿದ್ದೆವು. ಅದೇ ವೇಳೆ ಅಡ್ಡಗಟ್ಟಿದ್ದ ದುಷ್ಕರ್ಮಿಗಳಿಬ್ಬರು, ಸ್ನೇಹಿತೆಯನ್ನು ಹಿಡಿದು ಎಳೆದಾಡಿದ್ದರು. ಅನುಚಿತವಾಗಿ ವರ್ತಿಸಿ ಹಲ್ಲೆ ಸಹ ಮಾಡಿದ್ದರು. ನಂತರ, ಹೊಂಡಾ ಡಿಯೊ ದ್ವಿಚಕ್ರ ವಾಹನದಲ್ಲಿ ಪರಾರಿಯಾದರು’ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾರೆ.
‘ಘಟನೆ ನಂತರ, ಸ್ನೇಹಿತೆಯನ್ನು ಡ್ರಾಪ್ ಮಾಡಲು ಬೈಕ್ನಲ್ಲಿ ಅವರ ಮನೆಯತ್ತ ಹೊರಟಿದ್ದೆ. ದುಷ್ಕರ್ಮಿಗಳು ಪುನಃಗುಂಪು ಕಟ್ಟಿಕೊಂಡು ಬಂದು ನನ್ನ ಬೈಕ್ ತಡೆದಿದ್ದರು. ನಂತರ, ಜಗಳ ತೆಗೆದು ಕಲ್ಲಿನಿಂದ ಹೊಡೆದು ಕೊಲೆಗೆ ಯತ್ನಿಸಿದರು. ಜಗಳ ಬಿಡಿಸಲು ಬಂದಿದ್ದ ಸ್ನೇಹಿತೆಯ ಮೇಲೂ ಹಲ್ಲೆ ನಡೆಸಿದರು. ನಮ್ಮ ಚೀರಾಟ ಕೇಳಿ ಸ್ಥಳೀಯರು ಸಹಾಯಕ್ಕೆ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾದರು. ನಂತರ, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡೆವು’ ಎಂದು ಯುವಕ ಹೇಳಿರುವುದಾಗಿ ಪೊಲೀಸರು ವಿವರಿಸಿದರು.
ಸಿಗರೇಟ್ ವಿಷಯವಾಗಿ ಜಗಳ
‘ದೂರುದಾರರು ಹೋಟೆಲ್ನಿಂದ ಹೊರಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಸಿಗರೇಟ್ ಸೇದುತ್ತ ನಿಂತಿದ್ದರು. ಅದನ್ನು ದೂರುದಾರರು ಪ್ರಶ್ನಿಸಿದ್ದರು. ಅದೇ ಕಾರಣಕ್ಕೆ ಜಗಳ ಶುರುವಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಯುವಕನ ಜತೆಯಲ್ಲೇ ಮೊದಲಿಗೆ ಆರೋಪಿಗಳು ಜಗಳ ತೆಗೆದಿದ್ದರು. ಬಿಡಿಸಲು ಹೋದಾಗ ಸ್ನೇಹಿತೆ ಜತೆಯಲ್ಲಿ ಅನುಚಿತವಾಗಿ ವರ್ತಿಸಿದ್ದರು. ಈ ಸಂಬಂಧ ಸ್ನೇಹಿತೆಯ ಹೇಳಿಕೆಯನ್ನೂ ಪಡೆಯಲಿದ್ದೇವೆ. ಆರೋಪಿಗಳು ಸಿಕ್ಕ ಬಳಿಕವೇ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.