ADVERTISEMENT

ರಕ್ತದೊತ್ತಡ, ಮಧುಮೇಹ ಪರೀಕ್ಷೆ ಕಡ್ಡಾಯ: ಖಾದರ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ರಾಜ್ಯದ ಗ್ರಾಮೀಣ ಪ್ರದೇ­ಶ­ಗಳಲ್ಲಿರುವ 30 ವರ್ಷ ತುಂಬಿದವರಿಗೆ ಕಡ್ಡಾಯವಾಗಿ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಯನ್ನು ನಡೆಸ­ಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.­ಖಾದರ್‌ ಹೇಳಿದರು.

ಪೂರ್ಣಸುಧಾ ಕ್ಯಾನ್ಸರ್‌ ಫೌಂಡೇ­ಶನ್‌ ಮತ್ತು ರೋಟರಿ ಬೆಂಗ­ಳೂರು ಪಶ್ಚಿಮದ ಸಹಯೋಗದಲ್ಲಿ ರಾಜಭ­ವನದಲ್ಲಿ ಸೋಮವಾರ ಆಯೋಜಿಸಿದ್ದ ಸ್ತನ ಕ್ಯಾನ್ಸರ್‌ ಪತ್ತೆಯ ಸಂಚಾರಿ ಬಸ್‌ ಸೇವೆಯ (ಎಂಒಎಂ ಎಕ್ಸ್‌ಪ್ರೆಸ್‌) ಚಾಲನಾ ಕಾರ್ಯಕ್ರ­ಮದಲ್ಲಿ ಭಾಗವ­ಹಿಸಿ ಅವರು ಮಾತನಾ­ಡಿದರು.

‘ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಈ ತಪಾಸಣೆ ನಡೆಸಲಿದ್ದಾರೆ. 30 ವರ್ಷ ತುಂಬಿದ ಎಲ್ಲರಿಗೆ ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆಯನ್ನು ಕಡ್ಡಾ­ಯವಾಗಿ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
‘ಸ್ವಯಂ ಸೇವಾ ಸಂಸ್ಥೆಗಳ ಜತೆಗೆ ಸೇರಿ ಪ್ರತಿ ವಿಭಾಗದಲ್ಲಿಯೂ ನಾಲ್ಕು ಇದೇ ತರಹದ ಸ್ತನ ಕ್ಯಾನ್ಸರ್‌ ಪತ್ತೆ ಸಂಚಾರಿ ಬಸ್‌ಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.

‘ಆಸ್ಪತ್ರೆಗಳನ್ನು ಕಟ್ಟುವುದು ನಮ್ಮ ಸರ್ಕಾರದ ಉದ್ದೇಶವಲ್ಲ. ಬದಲಿಗೆ, ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡು­ವುದು ಮತ್ತು ಎಲ್ಲರಿಗೂ ಒಳ್ಳೆಯ ಆರೋಗ್ಯವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯ­ಕ್ರಮಗಳನ್ನು ಆಯೋಜಿಸಿದೆ’ ಎಂದು ವಿವರಿಸಿದರು.
‘ಜನರಿಗೆ ಅವರ ಆರೋಗ್ಯದ ಕುರಿತು ಯಾವುದೇ ರೀತಿಯ ಕಾಳಜಿಯಿಲ್ಲ. ವರ್ಷಕ್ಕೆ ಒಂದು ಬಾರಿಯಾದರೂ ಅವರ ದೇಹದ ಸ್ಥಿತಿಯ ಕುರಿತು ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋ­ಜಿಸಲಿದೆ’ ಎಂದು ಹೇಳಿದರು.

ರಾಜ್ಯಪಾಲ ಎಚ್‌.ಆರ್‌.­ಭಾರ­ದ್ವಾಜ್‌ ಮಾತನಾಡಿ, ‘ಈ ದೇಶ­ದಲ್ಲಿ ಶಿಕ್ಷಣ ಮತ್ತು ಆರೋಗ್ಯ ಬಡವರಿಗೆ ಎಟುಕಲಾರದಷ್ಟು ದುಬಾ­ರಿಯಾಗಿದೆ. ಮಾನವೀ­ಯತೆಯನ್ನು ಮರೆತು ಬರೀ ಹಣದಲ್ಲಿ ಎಲ್ಲವನ್ನೂ ಅಳೆಯಲಾ­ಗುತ್ತಿದೆ’ ಎಂದು ವಿಷಾದಿ­ಸಿದರು.

ಎಂಒಎಂ ಎಕ್ಸ್ ಪ್ರೆಸ್‌
ಕಡಿಮೆ ವೆಚ್ಚದ ಸ್ತನ ಕ್ಯಾನ್ಸರ್‌ ತಪಾಸಣೆ ಸೇವೆಯಾಗಿದೆ. ತರಬೇತಿ ಪಡೆದ ಮಹಿಳಾ ತಂತ್ರಜ್ಞರು ಮ್ಯಾಮೊ­ಗ್ರಾಮ್‌ ನಡೆಸುತ್ತಾರೆ. ರೇಡಿಯೊ ತಂತ್ರಜ್ಞರು ಎಕ್ಸ್‌ರೇ ವಿಶ್ಲೇಷಣೆ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಮುಂಚಿತ­ವಾಗಿಯೇ ಪತ್ತೆ ಹಚ್ಚಲು ಮ್ಯಾಮೊ­ಗ್ರಾಫಿ ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.