ಬೆಂಗಳೂರು: `ರಾಜಕಾಲುವೆಗಳ ಒತ್ತುವರಿ ತೆರವಿಗೆ ಈಗಾಗಲೇ ಪೀಣ್ಯ ಕೈಗಾರಿಕಾ ಪ್ರದೇಶದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ನಗರದ ಇತರ ಭಾಗಗಳಲ್ಲಿ ನಡೆದ ಒತ್ತುವರಿಯನ್ನೂ ತೆರವುಗೊಳಿಸಲಾಗುವುದು' ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ತಿಳಿಸಿದರು.
`ನಗರದ 857 ಕಿ.ಮೀ. ಉದ್ದದ ರಾಜಕಾಲುವೆ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ರೂ7,500 ಕೋಟಿ ಮೌಲ್ಯದ ಭೂಮಿ ಅತಿಕ್ರಮಣಗೊಂಡಿದೆ' ಎಂಬ ಬಿಜೆಪಿ ಸದಸ್ಯ ಎನ್.ಆರ್. ರಮೇಶ್ ಅವರ ದೂರಿಗೆ ಈ ರೀತಿ ಪ್ರತಿಕ್ರಿಯಿಸಿದರು.
`ರಾಜಕಾಲುವೆಗಳ ಸಮಗ್ರ ಸಮೀಕ್ಷೆ ನಡೆಸಿ, ಅತಿಕ್ರಮಣವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು' ಎಂದ ಅವರು, `ಒತ್ತುವರಿ ಮಾಡಿಕೊಂಡ ಪ್ರತಿಷ್ಠಿತ ಸಂಸ್ಥೆಗಳ ಕಟ್ಟಡಗಳನ್ನೂ ಬಿಡುವುದಿಲ್ಲ' ಎಂದು ತಿಳಿಸಿದರು.
`ರೂ1.5 ಲಕ್ಷ ವೆಚ್ಚದಲ್ಲಿ ಉಪಗ್ರಹದ ಮೂಲಕ ರಾಜಕಾಲುವೆಗಳ ನಕ್ಷೆ ತೆಗೆಯಿಸಲಾಗಿದ್ದು, ಭಾರಿ ಒತ್ತುವರಿ ಕಂಡುಬಂದಿದೆ. ಪ್ರತಿಷ್ಠಿತ ಸಂಸ್ಥೆಗಳೇ ಈ ಒತ್ತುವರಿ ಮಾಡಿಕೊಂಡಿವೆ. ಹೀಗಾಗಿ ಮಳೆ ನೀರು ಹರಿಯಲು ಸ್ಥಳವೇ ಇಲ್ಲದಂತಾಗಿದೆ' ಎಂದು ರಮೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.