ಬೆಂಗಳೂರು: `ರಾಜ್ಯದ ಇಂದಿನ ಜನರ ಸ್ಥಿತಿಗೆ ಬಹುತೇಕವಾಗಿ ರಾಜಕಾರಣಿಗಳೇ ಕಾರಣರಾಗಿದ್ದಾರೆ~ ಎಂದು ಅನಿವಾಸಿ ಭಾರತೀಯ ಸೌರವ್ಬಾಬು ಆರೋಪಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯದಲ್ಲಿ ಇಂದು ಬರ ಪರಿಸ್ಥಿತಿ ತಾಂಡವವಾಡುತ್ತಿದೆ. ರಾಜ್ಯದ ಜನತೆ ಹೊಟ್ಟೆಗೆ ಅನ್ನವಿಲ್ಲದೆ, ಕುಡಿಯಲು ಶುದ್ಧ ನೀರಿಲ್ಲದೆ ಬಳಲುತ್ತಿದ್ದಾರೆ. ಆದರೆ, ರಾಜ್ಯವನ್ನಾಳುವ ರಾಜಕಾರಣಿಗಳು ಇದನ್ನೆಲ್ಲಾ ಮರೆತು ತಮ್ಮ ರಾಜಕೀಯ ಲಾಭಕ್ಕಾಗಿ ಪರದಾಡುತ್ತಿದ್ದಾರೆ~ ಎಂದರು.
`ಅಮೆರಿಕದಲ್ಲಿ ನೆಲೆಸಿರುವ ನಾನು ಕೆಲ ದಿನಗಳ ರಜೆಗೆಂದು ಕರ್ನಾಟಕಕ್ಕೆ ಬಂದಿದ್ದೆ. ಆದರೆ, ಇಲ್ಲಿನ ಜನರ ಪರಿಸ್ಥಿತಿ ಮತ್ತು ರಾಜಕಾರಣಿಗಳ ಸ್ವಾರ್ಥ ಕಂಡು ದಿಗ್ಭ್ರಮೆಯಾಗಿದೆ~ ಎಂದು ಹೇಳಿದರು.
`ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಮಾಡಿದರು. ಈಗ ಅವರು ಮಾತು ಕೇಳುತ್ತಿಲ್ಲ ಎಂಬ ಉದ್ದೇಶದಿಂದ ಅವರನ್ನು ಕೆಳಗಿಳಿಸಬೇಕೆಂದು ಹುನ್ನಾರ ನಡೆಸಿದ್ದಾರೆ. ಇದಕ್ಕಾಗಿ ಯಡಿಯೂರಪ್ಪ ಹಾಗೂ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯರ ಜತೆನೂ ನಾನು ನೇರವಾಗಿ ಚರ್ಚೆ ಮಾಡಬೇಕು. ಅವರು ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕು. ರೆಸಾರ್ಟ್ ರಾಜಕೀಯ ಮಾಡುತ್ತ ತಮ್ಮ ಕರ್ತವ್ಯ ಮರೆತು ಕುಳಿತಿದ್ದಾರೆ~ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.