ಬೆಂಗಳೂರು: ಬೆಂಗಳೂರು ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ 2012ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಾಮಚಂದ್ರ ಗೌಡ ಅವರ ಆಯ್ಕೆ ಪ್ರಶ್ನಿಸಿ ಜೆಡಿಎಸ್ನ ಅ. ದೇವೇಗೌಡ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ಶನಿವಾರ ವಜಾಗೊಳಿಸಿದೆ.
‘ನನ್ನ ಪರವಾಗಿ ಚಲಾವಣೆ ಆಗಿದ್ದ 761 ಮತಗಳನ್ನು ಚುನಾವಣಾ ಅಧಿಕಾರಿ ಕುಲಗೆಟ್ಟ ಮತ ಎಂದು ಘೋಷಿಸಿದ್ದಾರೆ. ಇದು ಸರಿಯಲ್ಲ. ಆ ಮತಗಳನ್ನು ಸೇರಿಸಿದರೆ ನಾನು ಗೆಲುವು ಸಾಧಿಸುತ್ತಿದ್ದೆ’ ಎಂದು ದೇವೇಗೌಡ ಅವರು ಅರ್ಜಿಯಲ್ಲಿ ವಾದಿಸಿದ್ದರು.
ಈ ವಾದಕ್ಕೆ ಪೂರಕವಾಗಿ ಅರ್ಜಿದಾರರು ಅಗತ್ಯ ಆಧಾರಗಳನ್ನು ನೀಡಿಲ್ಲ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
‘ನನಗೇ ಮತ ನೀಡಿ, ಎದುರಾಳಿಗಳಿಗೆ ಬೇಡ’ ಎಂದು ಚುನಾವಣಾ ಪ್ರಚಾರದ ವೇಳೆ ಹೇಳುವುದು ಪ್ರಜಾಸತ್ತಾತ್ಮಕ ಹಕ್ಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಹುಂಡಿ ತೆರೆಯಲು ಅನುಮತಿ
ಬೆಂಗಳೂರು: ನಗರದ ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದ ಹುಂಡಿಯನ್ನು ತೆರೆಯಲು ಸರ್ಕಾರಕ್ಕೆ ಹೈಕೋರ್ಟ್ ಶನಿವಾರ ಅನುಮತಿ ನೀಡಿದೆ.
ಈ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ನಡೆಸುತ್ತಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.