ADVERTISEMENT

ರಾಮಸ್ವಾಮಿ ಪಾಳ್ಯ: ಬಾಲಕಿ ಆತ್ಮಹತ್ಯೆ

ಅಪರಾಧ ಸುದ್ದಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 20:12 IST
Last Updated 2 ಜೂನ್ 2013, 20:12 IST

ಬೆಂಗಳೂರು: ಬಾಣಸವಾಡಿ ಸಮೀಪದ ರಾಮಸ್ವಾಮಿಪಾಳ್ಯದಲ್ಲಿ ಲಾವಣ್ಯ (12) ಎಂಬ ಬಾಲಕಿ ಭಾನುವಾರ ಬೆಳಿಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಲಾವಣ್ಯ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೆಂಕಟೇಶ್‌ಕೃಷ್ಣ ಎಂಬುವರ ಮಗಳು. ಅಲ್ಲಿನ ಸ್ಥಳೀಯ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಆಕೆ, ಅಕ್ಕ ಕಾಮಾಕ್ಷಿ ಮತ್ತು ಭಾವ ಭಾಸ್ಕರ್ ಅವರ ಜತೆ ಒಂದೂವರೆ ತಿಂಗಳ ಹಿಂದೆ ನಗರಕ್ಕೆ ಬಂದಿದ್ದಳು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಕ್ಕ-ಭಾವ ಪಡಿತರ ಸಾಮಗ್ರಿ ತರಲು ಹೊರಗೆ ಹೋಗಿದ್ದಾಗ ಲಾವಣ್ಯ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾಳೆ. ಅವರು 11.30ರ ಸುಮಾರಿಗೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

`ಎಲೆಕ್ಟ್ರೀಷಿಯನ್ ಆದ ನಾನು, ಪತ್ನಿ ಮತ್ತು ಎರಡು ವರ್ಷದ ಮಗುವಿನೊಂದಿಗೆ ಆಂಧ್ರಪ್ರದೇಶದಲ್ಲೇ ವಾಸವಾಗಿದ್ದೆ. ಒಂದೂವರೆ ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಕುಟುಂಬ ಸದಸ್ಯರೊಂದಿಗೆ ನಗರಕ್ಕೆ ಬಂದು, ರಾಮಸ್ವಾಮಿಪಾಳ್ಯದಲ್ಲಿ ಬಾಡಿಗೆ ಮನೆ ಪಡೆದೆ. ಲಾವಣ್ಯಳಿಗೆ ಬೇಸಿಗೆ ರಜೆ ಇದ್ದ ಕಾರಣ ಆಕೆಯನ್ನೂ ನಮ್ಮ ಜತೆಗೇ ಕರೆದುಕೊಂಡು ಬಂದಿದ್ದೆ. ಆಕೆ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದೇ ತಿಳಿಯುತ್ತಿಲ್ಲ' ಎಂದು ಭಾಸ್ಕರ್ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.

`ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿಕೊಂಡಿರುವ ಲಾವಣ್ಯ, ದುಪ್ಪಟ್ಟದಿಂದ ನೇಣು ಹಾಕಿಕೊಂಡಿದ್ದಾಳೆ. ಬಾಲಕಿಯ ಪೋಷಕರಿಗೆ ವಿಷಯ ತಿಳಿಸಲಾಗಿದೆ' ಎಂದು ಬಾಣಸವಾಡಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.