ಹೊಸಕೋಟೆ: ರೈತರಿಂದ ಹಣ್ಣು, ತರಕಾರಿ ಪಡೆದು ಅದರ ಹಣವನ್ನು ರೈತರಿಗೆ ಸಂದಾಯ ಮಾಡದೆ ವ್ಯಕ್ತಿಯೊಬ್ಬ ಸುಮಾರು ರೂ 1.10 ಕೋಟಿ ವಂಚಿಸಿದ್ದು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ರೈತರು ಬುಧವಾರ ಇಲ್ಲಿಯ ಟೆಸ್ಕೊ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
`ಆಂಧ್ರಪ್ರದೇಶ ಮೂಲದ ರಾಮರಾಜ ಚಿಂತಾಲಪತಿ ಎಂಬಾತ ಹೊಸಕೋಟೆಯ ವಿವೇಕಾನಂದ ನಗರದಲ್ಲಿ `ಲಾವಣ್ಯ ಫಾರಂ' ಹೆಸರಿನಲ್ಲಿ ಕಚೇರಿ ತೆರೆದಿದ್ದು ಅಲ್ಲಿ ಹೊಸಕೋಟೆ ಸುತ್ತಮುತ್ತ ರೈತರ ಹಣ್ಣು ತರಕಾರಿಗಳನ್ನು ಖರೀದಿಸುತ್ತಿದ್ದ. ಖರೀದಿಸಿದ ಹಣ್ಣು ತರಕಾರಿಗಳನ್ನು ಹೊಸಕೋಟೆಯಲ್ಲೇ ಇದ್ದ ಟೆಸ್ಕೊ ಎಂಬ ಕಂಪೆನಿಗೆ ಆತ ಮಾರಾಟ ಮಾಡುತ್ತಿದ್ದ.
ಆರಂಭದಲ್ಲಿ ಆತ ರೈತರಿಗೆ ಸರಿಯಾಗಿ ಹಣ ಪಾವತಿ ಮಾಡುತ್ತಿದ್ದ. ಬರುಬರುತ್ತಾ ಆತ ಹಣ ಕೊಡಲು ವಿಳಂಬ ಮಾಡತೊಡಗಿದ. ಎರಡು ದಿನಗಳ ಹಿಂದೆ ಆರೋಪಿ ಕಚೇರಿಯನ್ನು ರಾತ್ರೋರಾತ್ರಿ ಮುಚ್ಚಿ ಪರಾರಿಯಾಗಿದ್ದಾನೆ' ಎಂದು ರೈತರು ದೂರಿದರು.
`ಹಣ್ಣು ತರಕಾರಿ ತರಲು ವಾಹನ ಬಾಡಿಗೆ ಪಡೆದಿದ್ದು ಅದರ ಹಣವನ್ನೂ ಆತ ಕೊಡದೆ ವಂಚಿಸಿದ್ದಾನೆ' ಎಂದು ರೈತರು ದೂರಿದರು. ಈ ಬಗ್ಗೆ ಎಸ್.ರವಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಲಾವಣ್ಯಫಾರಂ ಹಾಗೂ ಟೆಸ್ಕೊ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.